Monday, January 19, 2026

A Fan’s Reflection on A.R. Rahman’s BBC Interview

 

A Fan’s Reflection on A.R. Rahman’s BBC Interview

I am a hardcore A.R. Rahman fan, and that is unlikely to change.
Songs like “Katre En Vaasal” and “Taal Se Taal Mila” are not just tracks for me; they are memories, moods, and milestones. If you scroll through my Apple Music playlist, you will probably find only one or two songs that are not composed by Rahman. That is how deep the connection runs.

Over the years, I have consciously adopted one principle while engaging with public figures:
judge people primarily by the merit of their strengths, and allow room for disagreement when they speak outside their core area of expertise. This distinction matters, especially when artists are pulled into political and cultural debates.

I watched A.R. Rahman’s recent BBC interview in full. Despite the noise and outrage that followed on social media, my personal view of Rahman did not change at all. His music remains untouched by this discussion. That said, a few of his non-musical remarks did trigger debate. While much of the controversy focused on two statements, I personally found three aspects of the interview worth reflecting on.


Language, Identity, and the Hindi Question

What surprised me the most was Rahman’s admission that when he was advised to learn Hindi for career advancement, he instead chose to learn Urdu and Arabic. He also remarked that Tamilians generally find Hindi difficult to learn.

This is not merely a question of linguistic preference. It reflects the socio-political environment in which many Tamil elites are shaped. In Tamil Nadu, resistance to Hindi has long been cultivated as a marker of cultural self-respect. Rahman, in this sense, is not acting as a language ideologue, but he is clearly echoing the narratives of the environment he grew up in.

The irony, of course, is evident. Rahman became a pan-Indian icon largely through Hindi cinema, even while remaining emotionally distant from the language that amplified his reach. This contradiction is not malicious, but it is revealing.


“Something Changed in Bollywood”

Rahman also stated that many people feel Bollywood has changed over the last eight years, though he personally could not confirm this from direct experience. He cautiously added that it might be communal, and that he had heard a few “Chinese whispers.”

This distinction is crucial. What Rahman describes is not lived discrimination, but a perception shaped by conversations within elite circles. It is not personal victimhood, but second-hand inference.

When Rahman’s Bollywood career is viewed objectively, the claim of religious exclusion becomes difficult to sustain. For over two decades, he worked with the industry’s biggest directors, delivered era-defining albums, and received the highest institutional recognition. Bollywood historically has been one of India’s least religion-driven creative industries.

Rahman’s reduced presence in Hindi cinema over the last decade has far more plausible explanations: the collapse of album culture, the rise of remix-driven economics, cost and time incompatibilities, and the broader creative decline of mainstream Bollywood music. These changes sidelined many composers across communities. This is a market shift, not a religious one.


History, Discomfort, and the “Chhaava” Comment

The point where I personally disagreed with Rahman was his comment on the film Chhaava, which he described as divisive, a view echoed by the interviewer.

While cinematic liberties exist, the film broadly attempts to remain faithful to historical events. Discomfort with such portrayals, especially among many Muslims, is understandable. But discomfort alone does not make a historical narrative divisive.

This is ultimately a failure of historical education. When history is not taught honestly as history, later representations feel threatening rather than informative. Ironically, Rahman himself offers the most accurate response to this discomfort elsewhere in the same interview:
“You oppose what you do not know.”


Separating the Artist from the Narrative

The aspects of the interview I disagreed with seem to stem from a combination of limited historical engagement, inherited Tamil ideological conditioning, and elite echo chambers, rather than from malice or conspiracy. There is no need to frame this as jihadist propaganda, nor is there a need to sanctify every statement Rahman makes.

A.R. Rahman the musician is a civilisational asset to India.
A.R. Rahman the public intellectual is human, fallible, and occasionally misinformed.

That distinction is healthy.

Let the debate remain where it belongs.
And let his music continue — abundantly.

ಕೃಷ್ಣಪ್ರಕಾಶ ಬೊಳುಂಬು

Sunday, November 16, 2025

ದಕ್ಷಿಣಾಮೂರ್ತಿಯ ಮೌನವ್ಯಾಖ್ಯಾನ ಏಕಾಣ್ಮ ಪಂಚಕದಲ್ಲಿ ಪ್ರಕಟಗೊಂಡ ಬಗೆ

ದಕ್ಷಿಣಾಮೂರ್ತಿಯ ಮೌನವ್ಯಾಖ್ಯಾನ ಏಕಾಣ್ಮ ಪಂಚಕದಲ್ಲಿ ಪ್ರಕಟಗೊಂಡ ಬಗೆ

ಏಕಾಣ್ಮ ಪಂಚಕದ ಅಂತಿಮ ಚರಣ ಮೌನವ್ಯಾಖ್ಯಾನವನ್ನು ವಿಸ್ತರಿಸುತ್ತದೆ. ಮೌನೋಪದೇಶದಿಂದಲೇ ಪರಬ್ರಹ್ಮತತ್ತ್ವವನ್ನು ಪ್ರಕಟಿಸುವಂತಹವನಾದ ಆ ದಕ್ಷಿಣಾಮೂರ್ತಿಯನ್ನು ನಾನು ಸ್ತುತಿಸುತ್ತೇನೆ - ಎನ್ನುವ ದಕ್ಷಿಣಾಮೂರ್ತಿ ಸ್ತೋತ್ರದ ಧ್ಯಾನ ಶ್ಲೋಕದಲ್ಲಿಯೂ ಪ್ರಕಟವಾದುದು ಇದೇ ಭಾವ. 


ದಕ್ಷಿಣಾಮೂರ್ತಿ ಸ್ತೋತ್ರದ ಧ್ಯಾನ ಶ್ಲೋಕ

(ಆದಿಶಂಕರ ಭಗವತ್ಪಾದರ ರಚನೆ)




ಮೂಲ:

मौनव्याख्या प्रकटित परब्रह्मतत्त्वं युवानं

वर्षिष्ठांते वसद् ऋषिगणैः आवृतं ब्रह्मनिष्ठैः ।

आचार्येन्द्रं करकलित चिन्मुद्रमानंदमूर्तिं

स्वात्मारामं मुदितवदनं दक्षिणामूर्तिमीडे ॥१॥


ಲಿಪ್ಯಂತರಣ:

ಮೌನವ್ಯಾಖ್ಯಾ ಪ್ರಕಟಿತ ಪರಬ್ರಹ್ಮತತ್ತ್ವಂ ಯುವಾನಂ

ವರ್ಷಿಷ್ಠಾಂತೇ ವಸದ್ ಋಷಿಗಣೈಃ ಆವೃತಂ ಬ್ರಹ್ಮನಿಷ್ಠೈಃ |

ಆಚಾರ್ಯೇನ್ದ್ರಂ ಕರಕಲಿತ ಚಿನ್ಮುದ್ರಮಾನಂದಮೂರ್ತಿಂ

ಸ್ವಾತ್ಮಾರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ ||೧||


ಲಿಪ್ಯಂತರಣ (IAST):

maunavyākhyā prakaṭita parabrahmatattvaṃ yuvānaṃ

varṣiṣṭhānte vasad ṛṣigaṇaiḥ āvṛtaṃ brahmaniṣṭhaiḥ |

ācāryendraṃ karakalita cinmudram-ānandamūrtiṃ

svātmārāmaṃ muditavadanaṃ dakṣiṇāmūrtim īḍe ||


ಮೌನವ್ಯಾಖ್ಯಾನದಿಂದ ಪ್ರಕಟಗೊಂಡ ಪರಬ್ರಹ್ಮತತ್ತ್ವವನ್ನು; ತರುಣನಾದ -

ಬ್ರಹ್ಮನಿಷ್ಠರಾದ, ವಯೋವೃದ್ಧರಾದ ಋಷಿಗಳಿಂದ ಸುತ್ತುವರಿಯಲ್ಪಟ್ಟವನಾದ;

ಕರತಲದಲ್ಲಿರುವ ಚಿನ್ಮುದ್ರೆಯ ಮೂಲಕ ಜ್ಞಾನೋಪದೇಶವನ್ನು ನೀಡುವ;

ತನ್ನ ಸ್ವರೂಪದಲ್ಲಿಯೇ ಆನಂದಿಸುವವನಾದ, ಪ್ರಸನ್ನವದನನಾದ ದಕ್ಷಿಣಾಮೂರ್ತಿಗೆ ತಲೆಬಾಗುವೆ. 


ವ್ಯಾಖ್ಯಾನ:

"ಅಂದು ಆ ಆದಿಗುರು ದಕ್ಷಿಣಾಮೂರ್ತಿ ಆ ಹೊತ್ತು ಇದ್ದುದನ್ನು ಮಾತಿನಿಂದ ಹೇಳಿರಲಿಲ್ಲ." (ಏಕಾಣ್ಮ ಪಂಚಕಂ)  ಆದರೆ ಆ ಋಷಿವರ್ಯರು ಹೇಳದುದನ್ನು ಹೇಳದೆಯೇ ಗ್ರಹಿಸಬಲ್ಲವರಾಗಿದ್ದರು. ಇದು ಆದಿಗುರುವಿನ ಮೌನ ವ್ಯಾಖ್ಯಾನ. 


ಮಹಾದೇವನಾದ ಆದಿಗುರು ದಕ್ಷಿಣಾಮೂರ್ತಿ ತನ್ನ ಮಾತಿಲ್ಲದ ಮೌನವ್ಯಾಖ್ಯಾನದ ಮೂಲಕ ಪರಬ್ರಹ್ಮ ತತ್ತ್ವವನ್ನು ಬೋಧಿಸಿದನು ಮೌನದಿಂದಲೇ ವಯೋವೃದ್ಧರಾದ ಋಷಿಗಳಿಗೆ ಬೋಧಿಸಿದನು. ಮೌನವೆಂಬುದು ಇಲ್ಲಿ ನಿಷ್ಕ್ರಿಯತೆಯಲ್ಲ, ಬದಲಾಗಿ ಅದು ಜ್ಞಾನದ ಪಾರಮ್ಯ. 


ರಮಣ ಮಹರ್ಷಿಗಳು ಪರಬ್ರಹ್ಮ ತತ್ತ್ವವನ್ನು ಮಾತಿನಿಂದ ವಿವರಿಸಲು ಸಾಧ್ಯವಿಲ್ಲ ಎಂಬುದನ್ನು ಅತ್ಯಂತ ಅರ್ಥಗರ್ಭಿತವಾಗಿ ಸೂಚಿಸುತ್ತಾರೆ. ಶಬ್ದವು ದ್ವೈತದ ವಸ್ತು: ಶಬ್ದ–ಅರ್ಥ, ಗುರು–ಶಿಷ್ಯ, ಬೋಧಕ–ಬೋಧ್ಯ ಇವುಗಳೆಲ್ಲ ಭಿನ್ನತ್ವದ ಮೇಲೆ ನೆಲೆಗೊಂಡಿವೆ. ಆದರೆ ಪರಬ್ರಹ್ಮ ತತ್ತ್ವವೇ ಸಚ್ಚಿದಾನಂದ; ಅದು ಸ್ವಯಂ ಪ್ರಕಾಶಮಾನ, ನಿರ್ವಚನಾತೀತ. ಆದುದರಿಂದ ಆದಿಗುರು ದಕ್ಷಿಣಾಮೂರ್ತಿಯ ಬೋಧನೆ ಮಾತಿನಿಂದಲ್ಲ, ಸ್ವಾತ್ಮಾನುಭವದ ನಿಶ್ಶಬ್ದ ಪ್ರಕಾಶದಿಂದ ಎಂದು ತಿಳಿಯಬೇಕು. ಗುರುವಿನ ಪರಮ ಕರುಣಾಮಯವಾದ ಕಟಾಕ್ಷವೇ ಶಿಷ್ಯನ ಹೃದಯದಲ್ಲಿ ಬೋಧನೆಯಾಗಿ ನೆಲೆಗೊಳ್ಳುತ್ತದೆ.

ತಾತ್ಪರ್ಯ:

ಮೌನ ವ್ಯಾಖ್ಯಾನವು ಬೋಧನೆಯ ಉತ್ತುಂಗ ಮಾತ್ರವಲ್ಲದೆ ಅದು ಬೋಧದ ಸ್ವರೂಪವೇ ಆಗಿದೆ. ಇದು ರಹಸ್ಯ; ಇದು ಉಪನಿಷತ್ತುಗಳ ಬೋಧನೆಯ ಸಾರ.

ಕೃಷ್ಣಪ್ರಕಾಶ ಬೊಳುಂಬು


Sunday, November 9, 2025

ಮೌನ ವ್ಯಾಖ್ಯಾನದಿಂದ ಪ್ರಕಟಗೊಂಡ ಪ್ರರಬ್ರಹ್ಮ ತತ್ತ್ವ

  

 ಏಕಾಣ್ಮ ಪಂಚಕಂ - 5

ರಮಣ ಮಹರ್ಷಿಗಳ “ನಾನು–ಯಾರು” ಚಿಂತನೆಯ ಉಪಸಂಹಾರ

ಮೌನ ವ್ಯಾಖ್ಯಾನದಿಂದ ಪ್ರಕಟಗೊಂಡ ಪ್ರರಬ್ರಹ್ಮ ತತ್ತ್ವ

---------------------------------------------------------------------------




ಎಪ್ಪೋದುಂ ಉಳ್ಳದವ್ ಏಕಾಣ್ಮ ವಸ್ತುವೇ 

ಅಪ್ಪೋದು ಅವ್ವಸ್ತುವೈ ಆದಿಗುರು ಚೆಪ್ಪಾದು 

ಚೆಪ್ಪಿ ತೆರಿಯುಮಾ ಚೆಯ್ದನರೇಲ್ ಎವರ್ 

ಚೆಪ್ಪಿ ತೆರಿವಿಪ್ಪರ್ ಚೆಪ್ಪುಗ ಎನ ಇಪ್ಪೋದವ್


ಆವಗವುಮಿರ್ಪುದೆನೆ ಉಣ್ಮೆಯೆನಿಪ್ಪುದನು 

ಅಂದಿರ್ದುದನಾ ಆದಿಗುರುವರುಹಿರದೆ;

ಅರುಹಿಯುಮರಿವುದೆ ಅರುಹಲುಮಾರ್ಪುದೆ   

ಅರುಹಿ ಅರಿಯಗೊಡುವವರಾರು - ಇಂದೀಗ


ಪದವಿಂಗಡಣೆ:

[ಆವಗವುಂ+ಇರ್ಪ+ಉದು+ಎನೆ] [ಉಣ್ಮೆ+ಎನಿಪ್ಪ+ಉದನು] [ಅಂದು+ಇರ್ದುದಂ+ಆ] [ಆದಿಗುರು+ಅರುಹಿ+ಇರದೆ] [ಅರುಹಿಯುಂ+ಅರಿವುದೆ] [ಅರಿಯಗೊಡುವವರ್+ಆರು] [ಇಂದು+ಈಗ]


ಅರ್ಥಗಳು:

ಆವಗವುಂ = ಯಾವಾಗಲೂ, ಇರ್ಪ = ಇರುವ, ಎನೆ = ಎಂಬ, ಉಣ್ಮೆ = ಇರುವಿಕೆ, ಆದಿಗುರು = ದಕ್ಷಿಣಾಮೂರ್ತಿ, ಅರುಹು = ಅರಿಯಿಸು, ಇಂದು = ಈ ದಿನ, ಈಗ = ಈ ಹೊತ್ತು


ವ್ಯಾಖ್ಯಾನ:

ಯಾವಾಗಲೂ ಇರುವಂತಹುದಾದ ಉಣ್ಮೆಯೆನಿಸಿಕೊಂಡುದನ್ನು ಅರಿಯಬೇಕು. ಅಂದು ಆ ಆದಿಗುರು ದಕ್ಷಿಣಾಮೂರ್ತಿ ಆ ಹೊತ್ತು ಇದ್ದುದನ್ನು ಮಾತಿನಿಂದ ಹೇಳಿರಲಿಲ್ಲ. ಯಾಕೆಂದರೆ ಅದು ವಾಗಾಡಂಬರಗಳನ್ನು ಮೀರಿದುದು - ಅದು ಮಾತಿನಿಂದ ಹೇಳಿ ತಿಳಿಯಿಸುವ ವಿಷಯವಲ್ಲ. ಮಾತಿನಿಂದ ವಿವರಿಸಿದರೆ ಅದು ಅರಿವಿಗೆ ಅರಿವಿಗೆ ನಿಲುಕಬಲ್ಲುದೇ ಅಥವಾ ಅದನ್ನು ಮಾತಿನಿಂದ ವಿವರಿಸಲಿಕ್ಕೆ ಸಾಧ್ಯವಿದೆಯೇ? - ಈ ದಿನ, ಈ ಹೊತ್ತು ಅದನ್ನು ಅದನ್ನು ವಿವರಿಸಬಲ್ಲವರು ಯಾರಿದ್ದಾರೆ?! 


ತಾತ್ಪರ್ಯ:

ಇದು ರಮಣ ಮಹರ್ಷಿಗಳ ಉಪದೇಶದ “ನಾನು–ಯಾರು” ಚಿಂತನೆಯ ಉಪಸಂಹಾರ. ಆತ್ಮಸ್ವರೂಪವೇ ನಿತ್ಯ-ನಿರಂತರವಾದುದು. ಅದು ಹೊಸದಾಗಿ ಅನುಭವಕ್ಕೆ ಬರುವ ಯಾವುದೋ ವಸ್ತುವಲ್ಲ. ಅದನ್ನು ಹೇಳಲಾಗದು, ಉಪದೇಶಿಸಲಾಗದು - ಯಾಕೆಂದರೆ ಅದು ನಿನ್ನ “ಸಾಕ್ಷಿಭಾವ”ವೇ ಆಗಿದೆಯೆಂದು ಬೋಧಿಸುತ್ತಾರೆ. ಗುರುವಿನ ಮಾತಿನಂತೆ - “ಅದು ನೀನೇ” ಎಂಬುದು ಉಪದೇಶದ ಸಾರ. ಆದರೆ ನಿಜವಾದ ಅರಿವು ಮೌನವಾದ ಉಪದೇಶದಲ್ಲಿ ಒಡಮೂಡುತ್ತದೆ. ವಾಕ್ಯಗಳು ಅಲ್ಲಲ್ಲಿ ತೋರಿಬರುವಂತೆ ಆಂತರಿಕ ಪ್ರೇರಣೆಗಳಾಗಿ ಜಾಗೃತಗೊಳ್ಳುತ್ತದೆ. ರಮಣ ಮಹರ್ಷಿಗಳು “ಏಕಾಣ್ಮ ಪಂಚಕಂ” ಸ್ತೋತ್ರದ ಐದನೆಯ ಚರಣದಲ್ಲಿ ಅದ್ವೈತಾನುಭವದ ಚರಮ ಸ್ಥಿತಿಯಾದ ಆತ್ಮಸಾಕ್ಷಾತ್ಕಾರವನ್ನು ತೋರಗೊಟ್ಟಿದ್ದಾರೆ. 


ಕೃಷ್ಣಪ್ರಕಾಶ ಬೊಳುಂಬು


Saturday, November 8, 2025

ರಮಣ ಮಹರ್ಷಿಗಳ “ನಾನು–ಯಾರು” ಚಿಂತನೆಯ ಮುಂದುವರಿಕೆ

 

 ಏಕಾಣ್ಮ ಪಂಚಕಂ - 4


ರಮಣ ಮಹರ್ಷಿಗಳ “ನಾನು–ಯಾರು” ಚಿಂತನೆಯ ಮುಂದುವರಿಕೆ



ಪೊನ್ನುಕ್ಕು ವೇರಾಗ ಭೂಷಣಂ ಉಳ್ಳದೋ

ತನ್ನೈ ವಿಡು ತನುವೇದು - ತನ್ನೈ

ತನುವೆಂಬಾನ್ ಅಜ್ಞಾನಿ ತಾನಾಗ ಕೊಳ್ವಾನ್

ತನ್ನೈಯರಿಂದ ಜ್ಞಾನಿ ದರಿಪ್ಪೈ - ತಾನಾ ದೊಲಿಯಾಲ್


ಹೊನ್ನ ಹೊರತಾದ ಹಲ ಭೂಷಣಗಳಿರವು 

ತನ್ನನೇ ಬಿಟ್ಟು ತನುವೆತ್ತ - ತನ್ನನೇ 

ತನುವೆಂಬನಜ್ಞಾನಿ ತಾನಾಗಿದ್ದುಕೊಂಬನು 

ತನ್ನನರಿತನು ಜ್ಞಾನಿ ಚಿಂತಿಪನು ತನ್ನಲ್ಲಿ ತಾನೆನುತ.


ಪದವಿಂಗಡಣೆ:

[ಭೂಷಣಗಳು+ಇರವು] [ತನು+ಎತ್ತ] [ತನು+ಎಂಬಂ+ಅಜ್ಞಾನಿ] [ತಾನ್+ಆಗಿ+ಇದ್ದುಕೊಂಬನು][ತನ್ನಂ+ಅರಿತನು]


ಅರ್ಥಗಳು:

ಹೊನ್ನು = ಚಿನ್ನ, ಭೂಷಣ = ಅಲಂಕಾರ, ತನು = ಶರೀರ, ಅಜ್ಞಾನಿ = ಆತ್ಮಸ್ವರೂಪವನ್ನು ಅರಿಯದವನು, ಜ್ಞಾನಿ = ಆತ್ಮಸ್ವರೂಪವನ್ನು ಅರಿತವನು, ಚಿಂತಿಪನು = ಧ್ಯಾನಿಸುತ್ತಾನೆ


ವ್ಯಾಖ್ಯಾನ:

ಚಿನ್ನದಿಂದ ಆಭರಣವನ್ನು ಮಾಡಲಾಗುತ್ತದೆಯಾದರೂ ಆಭರಣಕ್ಕೆ ಚಿನ್ನದಿಂದ ಹೊರತಾದ ಸ್ವತಂತ್ರ ಅಸ್ತಿತ್ವವಿಲ್ಲ ಮತ್ತು ತಾನೆಂಬ ಅವಬೋಧದಿಂದ ಹೊರತಾದ ಶರೀರಕ್ಕೂ ಅಸ್ತಿತ್ವವಿಲ್ಲ. ಆ ಅವಬೋಧವನ್ನು ಲೆಕ್ಕಿಸದೆ ಶರೀರವನ್ನೇ “ನಾನು” ಎಂದು ಬಗೆಯುವವನು ತಾನು ಅಜ್ಞಾನಿಯಾಗಿ ಇದ್ದುಕೊಳ್ಳುತ್ತಾನೆ. ಆದರೆ ತನ್ನ ಸ್ವರೂಪವನ್ನರಿತವನಾದ ಜ್ಞಾನಿ ತಾನೆಂಬ ಅವಬೋಧದಲ್ಲಿ ತಾನೆಂದು ಧ್ಯಾನಿಸಬಲ್ಲನು.


ತಾತ್ಪರ್ಯ:

ರಮಣ ಮಹರ್ಷಿಗಳ ತತ್ತ್ವಬೋಧೆಯಲ್ಲಿ ಪರಮವಸ್ತುವಿನೆಡೆಗಿನ ಚಿಂತನೆ ಅತಿ ಸರಳವೆನಿಸಿಕೊಂಡಿದ್ದರೂ ಅದು ಅತ್ಯಂತ ಸೂಕ್ಷ್ಮವಾದುದೆಂದು ತಿಳಿಯಬೇಕು. ಆಭರಣಕ್ಕೆ ಚಿನ್ನದಿಂದ ಹೊರತಾದ ಸ್ವತಂತ್ರ ಅಸ್ತಿತ್ವವಿಲ್ಲದಂತೆ, ಶರೀರವೆಂಬ ರೂಪಕ್ಕೂ ಆತ್ಮಸ್ವರೂಪದಿಂದ ಹೊರತಾದ ಸ್ವತಂತ್ರ ಅಸ್ತಿತ್ವವಿಲ್ಲ. ಅಜ್ಞಾನಿಯಾದವನು ಶರೀರವನ್ನು “ನಾನು” ಎಂದು ತಪ್ಪಾಗಿ ಬಗೆದುಕೊಳ್ಳುತ್ತಾನೆ; ಜ್ಞಾನಿಯಾದವನು “ನಾನು” ಎಂಬ ಅವಬೋಧದಲ್ಲಿದ್ದುಕೊಂಡು “ನಾನು ಯಾರು?” ಎಂದು ಧ್ಯಾನಿಸಿದಾಗ “ತನ್ನಲ್ಲಿ ತಾನು” ಅಥವಾ ಆತ್ಮ ಸಾಕ್ಷಾತ್ಕಾರದ ಮೂಲಕ ನಿತ್ಯ ಚೈತನ್ಯಸ್ವರೂಪ ಸಚ್ಚಿದಾನಂದವಾಗಿ ವಿಶ್ರಾಂತಿ ಪಡೆಯುತ್ತಾನೆ. “ನಾನು” ಎನ್ನುವ ಬೌದ್ಧಿಕ ಮಟ್ಟದ ಭಾವನೆಯನ್ನು ತೊರೆದು ಅದರ ಮೂಲಕ್ಕೆ ಸಾಗಿ ಆತ್ಮಸ್ವರೂಪದಲ್ಲಿ ನೆಲೆಗೊಳ್ಳುವುದು ರಮಣ ಮಹರ್ಷಿಗಳು ಬೋಧಿಸಿದ ಸ್ವರೂಪಧ್ಯಾನದ ಸಾರ.


ಕೃಷ್ಣಪ್ರಕಾಶ ಬೊಳುಂಬು


ರಮಣ ಮಹರ್ಷಿಗಳ "ನಾನು-ಯಾರು" ಚಿಂತನೆ

 ಏಕಾಣ್ಮ ಪಂಚಕಂ - 3


ರಮಣ ಮಹರ್ಷಿಗಳ "ನಾನು-ಯಾರು" ಚಿಂತನೆ



ತನ್ನುಳ್ ತನುವಿರುಕ್ಕ ತಾನಾ ಜವುಡಲನ್,

ತನ್ನುಳ್ ಇರುಪ್ಪದಾ ತಾನುಣ್ಣುಮ್ — ಅನ್ನವನ್,

ಚಿತ್ತಿರತ್ತಿನ್ ಉಳ್ಳುಳದ  ಚಿತ್ತಿರತ್ತುಕ್ಕಾಧಾರ

ವಸ್ತಿರಮೆನ್ಱೆಣ್ಣುವಾನ್ ಪೋಲ್ವಾನ್ — ವಸ್ತುವಾಂ.


ತನ್ನೊಳಗೆ ತನುವಿರುತ ತಾನೇ ಜಡದೊಡಲನು, 

ತನ್ನೊಳಗಡರ್ದ ತಾನುಣ್ಣುವನ್ನವನು 

ಪಟದೊಡಲಡಕ ಪಟಲವದಕ್ಕಾಧಾರ, 

ವಸ್ತುವೆನೆ ವಸ್ತ್ರಮನೆಣಿಪನಂ ಪೋಲ್ವನು


ಪದವಿಂಗಡಣೆ:

[ಜಡದ+ಒಡಲನು] [ತನ್ನೊಳಗೆ+ಅಡರ್ದ] [ತಾನು+ಉಣ್ಣುವ+ಅನ್ನವನು] [ಪಟದ+ಒಡಲು+ಅಡಕ] [ಪಟಲ+ಅದಕ್ಕೆ+ಆಧಾರ] [ವಸ್ತ್ರಂ+ಎಂದು+ಎಣಿಪನಂ]


ಅರ್ಥಗಳು:

ತನು = ಶರೀರ, ಜಡ = ನಿರ್ಜೀವ, ಜಡದೊಡಲು = ನಿರ್ಜೀವವಾದ ಶರೀರ, ಉಣ್ಣುವ ಅನ್ನ = ತನ್ನೊಳಗೆ ಪ್ರಕಟಗೊಳ್ಳುವ ಚೈತನ್ಯ, ಪಟ = (ತೆರೆಯ ಮೇಲೆ ಪ್ರಕಟಗೊಳ್ಳುವ) ಚಿತ್ರ, ಪಟಲ = ಪರದೆ, ವಸ್ತು = ಪರಮ ತತ್ತ್ವ, ವಸ್ತುವೆನೆ = ವಸ್ತುವೆಂಬಂತೆ, ವಸ್ತ್ರ = ಬಟ್ಟೆ, ಪೆರಮೆ = ಭ್ರಮೆ


ವ್ಯಾಖ್ಯಾನ:

ತನ್ನೊಳಗೆಯೇ ಶರೀರವು ನೆಲೆಸಿರುವಾಗಲೂ ನಿರ್ಜೀವವಾದ ಆ ಶರೀರವೇ ತಾನಲ್ಲ - ತನ್ನೊಳಗೆ ಪ್ರಕಟಗೊಳ್ಳುವ ಚೈತನ್ಯವು ತಾನೆಂಬುದನ್ನು ಅರಿಯದವನು ಪಟವು ನಮ್ಮ ಕಣ್ಣಿನ ಮುಂದೆ ಮೂಡಿಕೊಳ್ಳಲು ಆಧಾರವಾದ ಪಟಲವೆಂಬ ವಸ್ತ್ರವನ್ನೇ ಪರಮ ವಸ್ತುವೆಂದು ಪೆರಮೆಗೊಳ್ಳುವವನಂತೆ.


ತಾತ್ಪರ್ಯ:

ರಮಣ ಮಹರ್ಷಿಗಳು ಆತ್ಮವು ಶರೀರದ ಒಳಗೆ ಎಲ್ಲಿಯೋ ಇದೆಯೆಂಬುದು ಭ್ರಮೆ ಎನ್ನುತ್ತಾರೆ. ಆತ್ಮವು ಶರೀರದ ಒಳಗೆ ಎಲ್ಲಿಯೋ ಇಲ್ಲ, ಅದರ ಬದಲಾಗಿ ಆತ್ಮದೊಳಗೆ ಶರೀರವಿದೆಯೆಂದು ತಿಳಿಯಬೇಕೆಂಬುದು ಈ ಮಾತಿನ ಅರ್ಥ. ಹಾಗಾಗಿ ಆತ್ಮವು ಎದೆಯಲ್ಲಿದೆಯೋ ಮೆದುಳಿನಲ್ಲಿದೆಯೋ ಎಂಬ ಚಿಂತನೆಗೆ ಅವಕಾಶವಿಲ್ಲದಂತೆ ಆತ್ಮದೊಳಗೆಯೇ ಶರೀರವಿದೆ ಎನ್ನುತ್ತಾರೆ. ಸಚ್ಚಿದಾನಂದ ಸ್ಥಿತಿಯಾದ ಆ ಸಹಜ ಸ್ಥಿತಿಯ ಒಳಗೆಯೇ ಶರೀರವಿದೆಯೆನ್ನುತ್ತ ಧ್ಯಾನಿಸಬೇಕು ಎಂದು ಮೂರನೆಯ ಈ ಚರಣದಲ್ಲಿ ರಮಣ ಮಹರ್ಷಿಗಳು ಸ್ಪಷ್ಟಪಡಿಸುತ್ತಾರೆ. ಶರೀರದ ಯಾವುದೋ ಒಂದು ಭಾಗವನ್ನು ಕೇಂದ್ರೀಕರಿಸಿ ಮಾಡುವ ಧ್ಯಾನವು ಸ್ವರೂಪ ಧ್ಯಾನವೆಂದಿನಿಸಿಕೊಳ್ಳದು ಎಂದು ರಮಣ ಮಹರ್ಷಿಗಳು ಸಾರುತ್ತಾರೆ. ಆತ್ಮವು ಅಚೇತನವಾದ ಶರೀರದ ಒಳಗೆ ಇದೆಯೆಂದು ಭಾವಿಸುವವನು ಚಲಚ್ಚಿತ್ರವೊಂದಕ್ಕೆ ಆಧಾರವಾಗಿರುವ ಪರದೆ ಆ ಚಿತ್ರದೊಳಗಿದೆಯೆಂದು ಪೆರಮೆಗೊಳ್ಳುವವನಂತೆಯೇ ಹೆಡ್ಡನಾದವನು ಎಂಬುದು ಮಹರ್ಷಿಗಳ ಅಭಿಮತ. 


ಪಟಲವು ಪಟ ನಮ್ಮ ಕಣ್ಣಿನ ಮುಂದೆ ಮೂಡಿಕೊಳ್ಳಲು ಆಧಾರವಾಗಿದೆ. ಅದೇ ರೀತಿಯಲ್ಲಿ -  ಶರೀರವೂ ಮಿಕ್ಕುಳಿದುವೂ ಕಾಣಿಸಿಕೊಳ್ಳಲು ಆತ್ಮವೇ ಆಧಾರವಾಗಿದೆ. ಆದುದರಿಂದ ನಮ್ಮಲ್ಲಿ ಆಳವಾಗಿ ಬೇರೂರಿರುವ ಅಜ್ಞಾನದಿಂದಲಾಗಿ ನಾವು ಈ ಶರೀರದ ಮಿತಿಯೊಳಗೆ ಬಂದಿಗಳಾಗಿದ್ದೇವೆಂದೂ ಈ ಶರೀರವೇ 'ನಾನು' ಎಂದೂ ಕಂಡರಿಯುತ್ತೇವೆ.


ಆತ್ಮವಿಚಾರದ ಉದ್ದೇಶವು ನಮ್ಮನ್ನು ನಾವು ನಿಜವಾಗಿಯೂ ಹೇಗಿದ್ದೇವೆಂದು ತಿಳಿದುಕೊಳ್ಳಲು ಅನುವು ಮಾಡಿಕೊಡುವುದು ಮತ್ತು ಆ ಮೂಲಕ ಈ ಶರೀರದೊಳಗೆ ನಾವು ಬಂದಿಗಳಾಗಿದ್ದೇವೆಂದು ಕಂಡರಿಯುವಂತೆ ಮಾಡುವ ಅಜ್ಞಾನವನ್ನು ನಾಶನಗೊಳಿಸುವುದು. ಈ ಶರೀರದ ಮೇಲಣ ಯಾವುದೇ ಬಿಂದುವಿನ ಬಗೆಗೆ ಧ್ಯಾನಿಸುತ್ತ ಅದು ನಮ್ಮ ಆತ್ಮದ ನೆಲೆದಾಣವೆಂದು ಕಲ್ಪಿಸಿಕೊಳ್ಳುವುದು ಆತ್ಮವಿಚಾರದ ಅಭ್ಯಾಸವೆನಿಸಿಕೊಳ್ಳದು. ನಮ್ಮ ಶರೀರವು ಕಲ್ಪಿತವಂತೆ; ನಮ್ಮ ಮನಸ್ಸಿನಲ್ಲಿ ಮಾತ್ರ ಇರುವ ಒಂದು ಆಲೋಚನೆಯಂತೆ; ನಾವು ಕನಸಿನಲ್ಲಿ 'ನಾನು' ಎಂದು ಕಂಡರಿಯುವ ಶರೀರದಂತೆ - ಅದು ನಮ್ಮ ಕಲ್ಪನೆಯಲ್ಲಿ ಮಾತ್ರ ಇದ್ದುಕೊಂಡಿದೆ. ನಾವು ಅದನ್ನು ಗಮನಿಸುವುದರಿಂದ ಮಾತ್ರ ಆ ಬಗೆಯಲ್ಲಿ ಅದನ್ನು ನಾವು ಅರಿಯುತ್ತೇವೆ. ಆದುದರಿಂದ ನಾವು ಶರೀರದ ಬಗೆಗೆ ಯಾವುದೇ ರೀತಿಯಲ್ಲಿ ಧ್ಯಾನ ಮಾಡಿದರೆ - ಅದರೆಡೆಗಿನ ನಮ್ಮ ನೋಟ ವಾಸ್ತವಿಕ ನೆಲೆಯದ್ದಾಗಿರದು ಮತ್ತು ಆ ಮೂಲಕ ಆ ಬಗೆಯ ಅರಿವನ್ನುಂಟುಮಾಡುವ ಅಜ್ಞಾನವನ್ನೇ ಶಾಶ್ವತವೆಂದು ಪೆರಮೆಗೊಳ್ಳುತ್ತೇವೆ. ನಾವು ನಿಜವಾಗಿಯೂ ಯಾರೆಂದು ತಿಳಿದುಕೊಳ್ಳಲು ಈ ಶರೀರದ ಮೇಲಣ ಮತ್ತು ಹೊರಗಣ ಪ್ರತಿಯೊಂದು ಆಲೋಚನೆ ಮತ್ತು ವಸ್ತುವಿನಿಂದ ನಮ್ಮ ಗಮನವನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡು ಅದನ್ನು ನಮ್ಮ ಇರುವಿಕೆಯ ಅವಬೋಧವೆನಿಸಿಕೊಂಡ 'ನಾನು' ಎಂಬುದರತ್ತ ಕೇಂದ್ರೀಕರಿಸಬೇಕು.


ಕೃಷ್ಣಪ್ರಕಾಶ ಬೊಳುಂಬು


Monday, November 3, 2025

ಏಕಾಣ್ಮ ಪಂಚಕಂ - 2

 ಏಕಾಣ್ಮ ಪಂಚಕಂ - 2

ತಾನು ತಾನಾಗಿರುತ್ತಲೂ ತನ್ನ ಸ್ಥಿತಿಯನ್ನು ಅರಿಯಲಾರದ ಕುಡುಕನಿಗೆ ಸಚ್ಚಿದಾನಂದ ಸ್ಥಿತಿಯನ್ನು ಬದಲಿಯಾಗಿ ಕೊಡು.

---------------------------------------------------------------------------------------------------------------------------

                                

ತಾನಿರುಂದುಂ ತಾನಾಗ ತನ್ನೈತ್ತಾ ನಾನೆವನ್

ಯಾನಿರುಕ್ಕುಂ ಸ್ಥಾನಂ ಎದುವೆನಕ್ಕೇಟ್ ಪಾನುಕ್ಕು

ಯಾನೆವನ್ ಎವ್ವಿಡಂ ಯಾನುಳನ್ ಎಂಡ್ರಮಡು

ಪಾನನೈ ಈಡು ಪಗರ್ ಸಚ್ಚಿದಾನಂದ


ತಾನು ತಾನಾಗಿರುತ ತನಗೆ ತಾನಾರೆಂದೊರಲಿ

ಆನಿರ್ಪ ತಾಣವೆದೆಂದೆಂಬನಿಗೆ

ಆನಾವನೆತ್ತಲಾನಿರ್ಪೆನೆಂಬುದನು

ಪಾನಿಗಮೀಡು ಕೊಡು - ಸಚ್ಚಿದಾನಂದ


ಪದವಿಂಗಡಣೆ:

[ತಾಣ+ಎದು+ಎಂದು+ಎಂಬನಿಗೆ] [ಆನು+ಆವನು+ಎತ್ತಲ್+ಆನ್+ಇರ್ಪೆನು+ಎಂಬುದನು] [ಪಾನಿಗಂ+ಈಡು] 


ಅರ್ಥಗಳು:

ಪಾನಿ = ಕುಡುಕ, ಈಡು = ಬದಲಿ, ಪಗರ್ = ಕೊಡು


ವ್ಯಾಖ್ಯಾನ:

ತಾನು ತಾನಾಗಿಯೇ ಇದ್ದಾಗಲೂ ತನ್ನ ನಿಜಸ್ವರೂಪವನ್ನು ಅರಿಯದೆ, “ನಾನು ಯಾರು?”, “ನಾನು ಎಲ್ಲಿರುವೆ?”, “ನಾನು ಹೇಗಿರುವೆ?” ಎಂಬ ಪ್ರಶ್ನೆಗಳನ್ನು ಕೇಳುವ ಅಜ್ಞಾನಿಯಾದ ಆ ಕುಡುಕನಿಗೆ ಆತನ “ನಾನು” ಎಂಬ ಭಾವಕ್ಕೆ ಬದಲಿಯಾಗಿ ಪರಮ ಸತ್ಯವಾದ ಸಚ್ಚಿದಾನಂದ ಸ್ಥಿತಿಯನ್ನು ನೀನು ಕೊಡು!


ತಾತ್ಪರ್ಯ:

ಆತ್ಮಾನುಭವದ ಆ ಸ್ಥಿತಿಯಲ್ಲಿ ಅಹಂಕಾರ ನಾಶಗೊಂಡು, ಪರಿಪೂರ್ಣ ಬೋಧೆಯ ಆನಂದವೊಂದೇ ಉಳಿಯುತ್ತದೆ - ಅದುವೇ ಸಚ್ಚಿದಾನಂದವೆಂಬ ಪರಮ ಸ್ಥಿತಿ.


ಕೃಷ್ಣಪ್ರಕಾಶ ಬೊಳುಂಬು




Saturday, November 1, 2025

ಏಕಾಣ್ಮ ಪಂಚಕಂ - 1

 ರಮಣ ಮಹರ್ಷಿಗಳು ಅದ್ವೈತ ವೇದಾಂತದ ಸಾರವನ್ನು ಬಹಿರಂಗಪಡಿಸಿದ  ರೀತಿ ಅನ್ಯಾದೃಶವಾದುದು. ರಮಣ ಮಹರ್ಷಿಗಳ "ಏಕಾಣ್ಮ ಪಂಚಕಂ" ಐದು ಚರಣಗಳಿಂದ ಕೂಡಿದ ಸ್ತೋತ್ರ. ತಮಿಳಿನಲ್ಲಿ 'ಆತ್ಮ' ಪದಕ್ಕೆ 'ಆಣ್ಮ' ಎಂಬ ಪದ ಸಂವಾದಿಯಾಗಿದೆ. ಹೀಗೆ ಐದು ಚರಣಗಳಿಂದ ಕೂಡಿದ ಈ ಸ್ತೋತ್ರವನ್ನು ಕನ್ನಡಕ್ಕೆ ಅನುವಾದಿಸುವ ವಿನಮ್ರ ಪ್ರಯತ್ನ ಇಲ್ಲಿದೆ.

The way Ramana Maharshi represented the essence of Advaita Vedanta is unique. Ramana Maharshi's "Ekanma Panchakam" is a hymn consisting of five stanzas. The word 'Aanma' is the equivalent of the word 'Atma' in Tamil. Thus, here is a humble attempt to translate this hymn consisting of five stanzas into Kannada.

------------------------------------------------------------------------------------------------------------------------




ತನ್ನೈ ಮಱನ್ದ್ ತನುವೇ ತಾನಾ ಎಣ್ಣಿ

ಎಣ್ಣಿಲ್ ಪಿರವಿ ಎಡುತ್ತಿರದಿ - ತನ್ನೈ

ಉಣರ್ನ್ದ್ ತಾನಾದಲ್ ಉಲಕಸಂಚಾರ

ಕನವಿನ್ ವಿೞಿತ್ತಾಲೇ ಕಾಣ್ಗ ಅನವರತಂ


ತನ್ನನೇ ಮರೆತು ತನುವೇ ತಾನೆಂದೆಣಿಸಿ,

ತನ್ನದೇ ಹಲಹೆರಿಗೆಗಳ ದಾಟಿ ;

ಎಚ್ಚೆತ್ತು ತಾನೆಂದರಿತು ಲೋಕಸಂಚಾರವೆನೆ

ಕನವು ಕಳೆಯುತಲದನೆ ಕಾಣ್ಬುದನವರತ.


ಪದವಿಂಗಡಣೆ:

[ಕಳೆಯುತಲಿ+ಅದನೆ] [ಕಾಣ್ಬುದು+ಅನವರತ]


ಅರ್ಥಗಳು:

ತನು = ಶರೀರ, ಹಲಹೆರಿಗೆಗಳ = ಹಲವಾರು ಜನ್ಮಗಳನ್ನು, ಲೋಕಸಂಚಾರವೆನೆ = ಲೋಕಸಂಚಾರವೆಂಬ, ಲೋಕಸಂಚಾರ = ಸಂಸಾರ, ಜನನ ಮರಣ ಚಕ್ರಗಳು, ಕನ = ಕನಸು, ಅನವರತ = ನಿತ್ಯವೂ


ವ್ಯಾಖ್ಯಾನ:

ತನ್ನನ್ನು ತಾನು ಮರೆತು ತನ್ನ ಶರೀರವನ್ನು ತಾನೆಂದು ಬಗೆದು ಹಲವಾರು ಜನ್ಮಗಳನ್ನು ಜೀವನು ದಾಟಿದನು. ಲೋಕಸಂಚಾರವೆಂಬ ಕನಸು ಕಾಣುತ್ತಿದ್ದ ಆ ಜೀವನು ಎಚ್ಚೆತ್ತು ತನ್ನನ್ನು ಅರಿತುಕೊಂಡು ಆ ಸತ್ಯವನ್ನು ನಿತ್ಯವೂ ಕಾಣುವಂತಾಗಲಿ.


ತಾತ್ಪರ್ಯ:

ಜೀವನು ತನ್ನನ್ನು ತಾನು ಮರೆತು ಶರೀರವನ್ನು ‘ನಾನು’ ಎಂದು ಬಗೆದ ಕಾರಣ, ಅನೇಕ ಜನ್ಮಗಳ ಕಾಲ ಸಂಸಾರದ ಕನಸು ಕಾಣುತ್ತಾನೆ. ಆತ್ಮಜ್ಞಾನವನ್ನು ತಂದುಕೊಂಡು ಜಾಗೃತನಾದಾಗ, ಸಂಸಾರವೆಂಬ ಆ  ಕನಸು ಮಾಯವಾಗುತ್ತದೆ; ಆ ಜಾಗೃತ ಸ್ಥಿತಿಯಲ್ಲಿ ನಿತ್ಯವೂ ಪರಮಾತ್ಮನೆಂಬ ಸತ್ಯವೇ ಕಾಣುತ್ತದೆ.


 ಕೃಷ್ಣಪ್ರಕಾಶ ಬೊಳುಂಬು


ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ

 ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...