ಮುನೀರ್ ಕಾಟಿಪಳ್ಳ ->
ಮುಸ್ಲಿಮರ ಜನಸಂಖ್ಯೆ ಶೇಕಡಾ 30 ಕ್ಕಿಂತ ಹೆಚ್ಚಿರುವ ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ತೀವ್ರ ಮುಸ್ಲಿಮ್ ದ್ವೇಷಿ ಕಾರ್ಯಕ್ರಮದ ಬಿಜೆಪಿ ಭರ್ಜರಿ ಬಹುಮತದಿಂದ ಗೆದ್ದಿದೆ. ಅಂದರೆ, ಮುಸ್ಲಿಮರ ಶೇಕಡಾವಾರು ಜನಸಂಖ್ಯೆ ಹೆಚ್ಚಿರುವುದು ಬಿಜೆಪಿಯ ವಿಭಜನೆಯ ರಾಜಕಾರಣಕ್ಕೆ ಅನುಕೂಲವಾಗಿ ಒದಗಿದೆ.
ಕೇರಳದಲ್ಲಿ ಮುಸ್ಲಿಮ್ ಲೀಗ್ ಸ್ಪರ್ಧಿಸಿದ 27 ಸ್ಥಾನಗಳಲ್ಲಿ 23 ಸ್ಥಾನ ಗೆದ್ದಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಮುಸ್ಲಿಮ್ ಮತವನ್ನು ಪ್ರವಾಹದ ರೀತಿಯಲ್ಲಿ ಹರಿಸಿದೆ. ಅದೇ ಸಂದರ್ಭ ಬಿಜೆಪಿ ಪ್ರಥಮ ಬಾರಿಗೆ 3 ಸ್ಥಾನ ಗೆದ್ದಿದೆ. ಎಡರಂಗ ತೀವ್ರ ಹಿನ್ನಡೆ ಅನುಭವಿಸಿದೆ. ಗೆಲುವಿನ "ಸಂಭ್ರಮ" ದಲ್ಲಿ ಮುಸ್ಲಿಮ್ ಲೀಗ್ ಕಾರ್ಯಕರ್ತರು ತಮ್ಮ ಹಸಿರು ಧ್ವಜದೊಂದಿಗೆ ಸಿಪಿಐಎಂ ಕಚೇರಿಗಳಿಗೆ ನುಗ್ಗಿ ದಾಂಧಲೆಗೈದಿದ್ದಾರೆ. ಅಟ್ಟಹಾಸ ಮೆರೆದಿದ್ದಾರೆ.
ಭಾರತದ ಸಂಸದೀಯ ರಾಜಕಾರಣ, ಚುನಾವಣಾ ವ್ಯವಸ್ಥೆ ತೀರಾ ಸೂಕ್ಷ್ಮವಾದದ್ದು.ಜನ ಸಮುದಾಯ ಸಹಜವಾಗಿಯೆ ಸೆಕ್ಯುಲರ್ ಆಗಿರುವುದಿಲ್ಲ, ಆಗಿ ಉಳಿಯುವುದಿಲ್ಲ. ಅದಕ್ಕಾಗಿ ಹಗಲು ರಾತ್ರಿ ಶ್ರಮ ಪಡಬೇಕು. ಮುಸ್ಲಿಮ್ ಸಮುದಾಯಕ್ಕೆ ಈ ಸೂಕ್ಷ್ಮತೆ ಅರ್ಥ ಆಗಬೇಕು.
ಇದು ಮೇಲ್ನೋಟಕ್ಕೆ ಒಂದು ಸಮುದಾಯಕ್ಕೆ ನೀಡುವ ಎಚ್ಚರಿಕೆಯಂತೆ ಕಂಡರೂ ಇದು "ಮುಸ್ಲಿಂ ಅಸ್ಮಿತೆ"ಯನ್ನು ಪ್ರತ್ಯೇಕಿಸಿ ನೋಡಿ ಅವರಿಗಾಗಿ ಬರೆದ ಲೇಖನ. ಇಂತಹ ಲೇಖನಗಳನ್ನು ಬೇಕಾದರೆ ತಮ್ಮ ಮಜ್ಲಿಸ್ ಕಮಿಟಿಗಳಲ್ಲಿ ಬರೆದು ಓದಿಕೊಳ್ಳುವುದು ಬಿಟ್ಟು ಸಾರ್ವತ್ರಿಕವಾಗಿ ಹಂಚುವುದು ಪ್ರಜಾಪ್ರಭುತ್ವಕ್ಕೆ ಮಾರಕವೂ ಹೌದು.
"ಮುಸ್ಲಿಂ ಸಮುದಾಯಕ್ಕೆ ಈ ಸೂಕ್ಷ್ಮತೆ ಅರ್ಥವಾಗಬೇಕು" ಎಂದು ಹೇಳುವಾಗ, ಮುಸ್ಲಿಮರನ್ನು ದೇಶದ ಸಾಮಾನ್ಯ ನಾಗರಿಕ ಪ್ರಜ್ಞೆಯಿಂದ ಹೊರಗಿಟ್ಟು, ಅವರನ್ನೊಂದು ಪ್ರತ್ಯೇಕ 'ರಾಜಕೀಯ ಘಟಕ'ವಾಗಿ ನೋಡಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಮುಖ್ಯ ಆಶಯವಾದ "ಎಲ್ಲರೂ ಸಮಾನ ನಾಗರಿಕರು" ಎಂಬುದನ್ನು ಪರಿಗಣಿಸಿಲ್ಲ.
ಮುಸ್ಲಿಮರನ್ನು ಕೇವಲ ಒಂದು ಮತಬ್ಯಾಂಕ್ ಅಥವಾ ಅಸ್ಮಿತೆಯಾಗಿ ನೋಡುವುದರಿಂದಲೇ ಅಂತರ ಹೆಚ್ಚಾಗುತ್ತಿದೆ. ಮುಸ್ಲಿಂ ಆದ ಒಂದೇ ಕಾರಣಕ್ಕೆ ಯಾರೂ ವಿಶಿಷ್ಟರಲ್ಲ, ಅವರದ್ದಾದ ಪ್ರತ್ಯೇಕ ನಿಲುವುಗಳನ್ನು ಅವರು ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರು ಎಲ್ಲಾ ಭಾರತೀಯರಂತೆ ತಾವು ಎಂಬ ಮನೋಭಾವ ಬೆಳೆಸಿಕೊಂಡು ಮುಂದುವರಿದಾಗ ಮಾತ್ರ ಪ್ರತ್ಯೇಕತೆಯ ನಿಲುವುಗಳು ಗೌಣವಾಗಲು ಸಾಧ್ಯ.


