Thursday, July 16, 2026

ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ

ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ ಈಗ ಸಣ್ಣ ಬದಲಾವಣೆಗಳೊಂದಿಗೆ "ಕನ್ನಡ ಮೀಡಿಯಂ ಕಾಸರಗೋಡು" ಯೂಟ್ಯೂಬ್ ಚಾನೆಲಿನಲ್ಲಿ ನಾಲ್ಕು ಭಾಷೆಗಳಲ್ಲಿ ದೃಶ್ಯನಿರೂಪಣೆಯೊಂದಿಗೆ ಪ್ರಸ್ತುತಿಗೊಳ್ಳುತ್ತಿದೆ.


ಕನ್ನಡ


                       ಹಿಂದಿ



 ಮಲೆಯಾಳ


ತಮಿಳು


ದಾಂಪತ್ಯ ಪ್ರಣಯವೇ ಈ ಕವಿತೆಯ ವಿಷಯವಸ್ತು. ನಿತ್ಯದ ಬಡಿದಾಟಗಳ ಮತ್ತು ಅದರೊಂದಿಗಿನ ಸಿಡಿಮಿಡಿಗಳನ್ನು ಮತ್ತು ಎದೆಯಾಳದಲ್ಲಿ ಸೆಲೆಯಾದ ಪ್ರಣಯದ ಇರವನ್ನು ಸೂಚಿಸುವ ಕವಿತೆಯಿದು. ಪ್ರತಿ ದಿನದ ಅಗಲಿಕೆಯಲ್ಲೂ ಪ್ರತಿ ಕ್ಷಣದ ಸಿಡಿಮಿಡಿಯಲ್ಲೂ ಪ್ರಣಯವೊಂದಿರುತ್ತದೆ; ಅದು ಮೌನದೊಳಗೆ ಮಾತಾಗಿರುತ್ತದೆ — ಎದೆಯಾಳದಲ್ಲಿ ಬತ್ತದ ಸೆಲೆಯಾಗಿರುತ್ತದೆ. ದಿನನಿತ್ಯದ ಸಣ್ಣಪುಟ್ಟ ಜಗಳಗಳು, ಬಡಿದಾಟಗಳ ನಡುವೆಯೂ ದಿನವೂ ಅರಳುವ ಹೂವಿನಂತೆ ಪರಸ್ಪರ ಪ್ರೀತಿ ದಿನದಿಂದ ದಿನಕ್ಕೆ ಇಮ್ಮಡಿಸುತ್ತಲಿದ್ದು ಹೃದಯದ ಗೂಡಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ.


ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ

ಇದರ ಯಥಾಪ್ರತಿಯನ್ನು ಸಂಪದ ಕನ್ನಡ ತಾಣದಲ್ಲಿ ಓದಬಹುದು.  


ಪ್ರತಿ ದಿನದ ಅಗಲಿಕೆಯಲ್ಲೂ

ಪ್ರತಿ ಕ್ಷಣದ ಸಿಡಿಮಿಡಿಯಲ್ಲೂ

ಪ್ರಣಯವೊಂದು ಇದ್ದೇ ಇರದೇ

ಎದೆಯೊಳೊಂದು ಸೆಲೆಯಾಗಿ


ಪ್ರತಿ ಮೃದುಲ ಸ್ಪರ್ಶದಲ್ಲೂ

ಹರಿವ ಕಂಬನಿಯಲ್ಲೂ

ಅರಿಯದೊಂದು ಹೆದರಿಕೆಯಲ್ಲೂ

ಪ್ರೀತಿಯಿದ್ದೇ ಇರದೇ ಮರ್ಮಗಳನು ತಿಳಿಯದೆ


ಅನುದಿನದ ಬಡಿದಾಟದಲೂ

ಅರಳುತ್ತಿರುವ ಹೂವಿನಂತೆ

ಇಮ್ಮಡಿಸುತಿದ್ದೇ ಇರದೇ

ಪ್ರೀತಿ ಎದೆಯ ಗೂಡಿನೊಳು


ಹೊಸ ರೂಪದ 'ದಾಂಪತ್ಯ ಪ್ರಣಯ' ಕವಿತೆ

ಪ್ರತಿ ದಿನದ ಅಗಲಿಕೆಯಲ್ಲೂ

ಪ್ರತಿ ಕ್ಷಣದ ಸಿಡಿಮಿಡಿಯಲ್ಲೂ

ಪ್ರಣಯವೊಂದು ಇದ್ದೇ ಇರದೇ

ಎದೆಯೊಳೊಂದು ಸೆಲೆಯಾಗಿ

ಹೇಳಿರದ ಗುಟ್ಟುಗಳಿರದೇ

ಮೌನದೊಳಗೆ ಮಾತಾಗಿ 


ಪ್ರತಿ ಮೃದುಲ ಸ್ಪರ್ಶದಲ್ಲೂ

ಹರಿಯುತಿಹ ಕಂಬನಿಯಲ್ಲೂ

ಪ್ರೀತಿಯೊಂದು ಇದ್ದೇ ಇರದೇ

ಮರ್ಮಗಳನು ತಿಳಿಯದೆ 

ಹೇಳಿರದ ಗುಟ್ಟುಗಳಿರದೇ

ಮೌನದೊಳಗೆ ಮಾತಾಗಿ


ಅನುದಿನದ ಬಡಿದಾಟದಲೂ

ನಿತ್ಯ ಅರಳುವ ಹೂವಿನಂತೆ

ಇಮ್ಮಡಿಸುತ ಇದ್ದೇ ಇರದೇ

ಪ್ರೀತಿ ಎದೆಯ ಗೂಡಿನೊಳು

ಹೇಳಿರದ ಗುಟ್ಟುಗಳಿರದೇ

ಮೌನದೊಳಗೆ ಮಾತಾಗಿ


"ಹೇಳಿರದ ಗುಟ್ಟುಗಳಿರದೇ" ಮತ್ತು "ಮೌನದೊಳಗೆ ಮಾತಾಗಿ" ಎರಡು ಸಾಲುಗಳನ್ನು ಇಲ್ಲಿ ಹೊಸದಾಗಿ ಸೇರಿಸಲಾಗಿದೆ.


ಹಾಡುವಿಕೆ ಮತ್ತು ದೃಶ್ಯನಿರೂಪಣೆ

ಕವಿತೆಯ ದೃಶ್ಯನಿರೂಪಣೆ ಮತ್ತು ಹಾಡುವಿಕೆ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮೂಡಿಬಂದಿದೆ. ಕೃತಕ ಬುದ್ಧಿಮತ್ತೆಗೆ ರಾಗ ಸಂಯೋಜನೆಗೆ ಆದೇಶಿಸುವಾಗ "ಬಯಕೆಗಳನ್ನು ಸೂಕ್ಷ್ಮವಾಗಿ ಉದ್ದೀಪಿಸಬೇಕು; ಉದ್ರೇಕಿಸಿ ಪ್ರಚೋದಿಸಬಾರದು" ಎಂದು ಕಟ್ಟುಪಾಡು ವಿಧಿಸಿದ್ದೆ. ನಾನೊಬ್ಬ ಬರಹಗಾರನಾಗಿ ಇದು ರಾಗ ಸಂಯೋಜನೆಗೆ ಪೂರಕವಾಗಿ ಮೂಡಿದೆಯೆಂಬ ನಂಬಿಕೆಯಲ್ಲಿದ್ದೇನೆ.   


ಹಾಡುವಿಕೆ

ಹಾಡುವಿಕೆಯನ್ನು ಸುನೋ ಎಐಯ ಉಚಿತ ಸ್ತರದಲ್ಲಿ ಮೂಡಿಸಲಾಯಿತು. ಸುನೋ ಎಐಗಾಗಿ ವಿಶೇಷ ಪ್ರೋಂಪ್ತ್ ಬರೆಯಲಿಕ್ಕೆ ಜೆಮಿನಿ, ಕ್ಲೌಡ್ ಮತ್ತು ಚಾಟ್‍ಜಿಪಿಟಿಗಳ ಬಳಕೆಯಾಗಿದೆ. ಕೆಲವು ಹಾಡುಗಳು ನಿರೀಕ್ಷೆಗೆ ತಕ್ಕನಾಗಿ ಇರಲಿಲ್ಲ. ಅಂಥವುಗಳನ್ನು ನಿರ್ದಾಕ್ಷಿಣ್ಯವಾಗಿ ತಳ್ಳಬೇಕಾಯಿತು. ಇನ್ನು ಕೆಲವು ಹಾಡುಗಳಲ್ಲಿ ಉಚ್ಚಾರದೋಷಗಳಿದ್ದುವು.  ಉಚ್ಚಾರದೋಷಗಳನ್ನು ಪೂರ್ಣವಾಗಿ ಇಲ್ಲದಾಗಿಸಲು ಸಾಧ್ಯವಿಲ್ಲದಿದ್ದರೂ ಹೆಚ್ಚುವರಿಯಾಗಿ ಮೂಡಿದ ಉಚ್ಚಾರಣೆಗಳನ್ನು ಆಡಿಯೋ ಎಡಿಟರ್ ಸಹಾಯದಿಂದ ಎಡಿಟ್ ಮಾಡಬೇಕಾಯಿತು. 


ದೃಶ್ಯನಿರೂಪಣೆ

ಹಾಡುಗಳ ಹತ್ತು ಸೆಕೆಂಡ್ ಕಾಲಾವಧಿಯ ಅಣಿಮೇಷನ್ ಚಿತ್ರಗಳನ್ನು ಜೆಮಿನಿ ಎಐಯ ಸಹಾಯದಿಂದ ಮೂಡಿಸಲಾಯಿತು. ಜೆಮಿನಿ ಎಐಯಿಂದ ಮೂಡುವ ವಿಡಿಯೋಗಳಲ್ಲಿ ಜೆಮಿನಿ ಲೋಗೋ ಇರುತ್ತದೆ. ಇದರಲ್ಲಿ ಲೋಗೋ ಕಾಣಿಸದಂತೆ ಮಾಡಲು ಪುನಃ ಎಡಿಟರ್ ಸಹಾಯ ಮಾಡಿದ್ದಾನೆ.


ಒಂದು ವಾಕ್ಯದ ಪ್ರೋಂಪ್ತ್ ಬರೆದು ಇಡಿಯ ವಿಡಿಯೋ ಮತ್ತು ಹಾಡುಗಳನ್ನು ತಯಾರಿಸುವುದು ಪೂರ್ಣವಾಗಿ ಕಲ್ಪಿತ. ಹಾಗಾಗಿ ಇದನ್ನು ನೋಡಿ ಯಾರಾದರೂ "ಎಂಚಿನ! ಕನ್ನಡ ಮೀಡಿಯಂ ಕಾಸರಗೋಡಾ! ಅವು ಮಾಂತ ಎಐಡ್ ಮಲ್ಪುನಿಯೇ; ಅವ್ವೆನ್ ಏರ್ಲಾ ಮಲ್ಪೋಲಿ" ಅಥವಾ "ಯಾವದು!  ಕನ್ನಡ ಮೀಡಿಯಂ ಕಾಸರಗೋಡಾ! ಅದೆಲ್ಲ ಎಐಲಿ ಮಾಡುವದೂಳಿ; ಅದರ ಆರೂ ಮಾಡುಗು" ಎಂದು ತಿಳಿದುಕೊಳ್ಳುವುದಿದ್ದರೆ ದಯವಿಟ್ಟು ಇದನ್ನು ಓದಬೇಕೆಂದು ಕೇಳಿಕೊಳ್ಳುತ್ತೇನೆ.


ಇದು ಕಾಸರಗೋಡಿನ ಕನ್ನಡ

ಚಾನೆಲಿನ ಹೆಸರು ಕನ್ನಡ ಮೀಡಿಯಂ ಕಾಸರಗೋಡು ಯೂಟ್ಯೂಬ್ ಚಾನೆಲ್ . ಕಾಸರಗೋಡು ಕನ್ನಡಿಗರ ಕನ್ನಡ ಭಾಷೆಯ ಅಭಿವ್ಯಕ್ತಿಗೆಂದೇ ಮಾಡಿರುವ ಚಾನೆಲ್ ಕನ್ನಡ ಮೀಡಿಯಂ ಕಾಸರಗೋಡು ಯೂಟ್ಯೂಬ್ ಚಾನೆಲ್. ಇಲ್ಲಿ ಇಂಡಿಕ್ ಪರಂಪರೆಯ ಜೀವನ ವಿಧಾನಗಳನ್ನು ಹೇಳಲಾಗುತ್ತದೆ, ಕನ್ನಡ ಭಾಷೆಯ ಅಭಿವ್ಯಕ್ತಿ ಕಾಸರಗೋಡಿನಲ್ಲಿ ಯಾವ ಬಗೆಯಲ್ಲಿ ಆಗುತ್ತಿದೆ ಎಂಬುದರ ಉದಾಹರಣೆಯಾಗಿಯೂ ಕನ್ನಡ ಮೀಡಿಯಂ ಕಾಸರಗೋಡು ಯೂಟ್ಯೂಬ್ ಚಾನೆಲಿನಲ್ಲಿ ನೋಡಬಹುದು.


ಇದು ಇಂಡಿಕ್ ಜೀವನವಿಧಾನದ ಒಳಗುಟ್ಟು. ಇದು ಕಾಸರಗೋಡಿನ ಕನ್ನಡ. ಇದು ಕಾಸರಗೋಡಿನ ಕನ್ನಡ. 🎶@Kannada Medium Kasaragod





Saturday, May 9, 2026

ಕಗ್ಗಮಾಲಿಕೆ - ೭: ದ್ವೈತದೊಳದ್ವೈತದ ಕಾಣ್ಕೆ

  

ಕಗ್ಗಮಾಲಿಕೆ - ೭: ದ್ವೈತದೊಳದ್ವೈತದ ಕಾಣ್ಕೆ

ಪೀಠಿಕೆ:

ಚಿಟಿಕೆ ಹೊಡೆಯಲು ಎರಡು ಬೆರಳುಗಳು ಬೇಕಾಗುವಂತೆ, ಲೋಕದ ವ್ಯವಹಾರದಲ್ಲಿ ದ್ವೈತವೇ ಇರುತ್ತದೆ. ಆದರೆ ಪರಮತತ್ತ್ವ ಏಕವೆಂದು ತಿಳಿಯಬೇಕು.


ಕಗ್ಗ:

ಎರಡುಮಿರಬಹುದು ದಿಟ; ಶಿವರುದ್ರನಲೆ ಬೊಮ್ಮ! ।

ಕರವೊಂದರಲಿ ವೇಣು, ಶಂಖವೊಂದರಲಿ! ॥

ಬೆರಳ್ಗಳೆರಡಾನುಮಿರೆ ಕೈ ಚಿಟಿಕೆಯಾಡುವುದು ।

ಒರುವನಾಡುವುದೆಂತು? - ಮಂಕುತಿಮ್ಮ ॥



ವ್ಯಾಖ್ಯಾನ:

ಎರಡು ರೂಪಗಳಲ್ಲಿ ಒಂದು ಚೈತನ್ಯದ ಆವಿರ್ಭಾವವಾಗಿ ಶಾಂತಸ್ವರೂಪನಾದ ಶಿವ ಮತ್ತು ಭಯ ಹುಟ್ಟಿಸುವ ಪ್ರಳಯರುದ್ರ — ಇವೆರಡೂ ನಿಜವೇ ಆಗಿರಬಹುದು. ಒಂದು ಕೈಯಲ್ಲಿ ಕೊಳಲನ್ನು ಹಿಡಿದ ವೇಣುಗೋಪಾಲನೂ ಇನ್ನೊಂದು ಕೈಯಲ್ಲಿ ಶಂಖವನ್ನೂ ಹಿಡಿದ ಮಹಾವಿಷ್ಣುವೂ ಒಂದೇ ಚೈತನ್ಯದ ಎರಡು ಬಗೆಯ ಆವಿರ್ಭಾವಗಳು ಯಾಕಾಗಿರಬಾರದು! ಬೆರಳುಗಳು ಎರಡಾದರೂ ಇದ್ದರೆ ಚಿಟಿಕೆ ಹಾಕಲು ಸಾಧ್ಯವಾಗುತ್ತದೆ. ಒಂದೇ ರೂಪದಲ್ಲಿದ್ದರೆ ಎಲ್ಲವನ್ನೂ ಮಾಡಿ ಮುಗಿಸುವುದು ಸಾಧ್ಯವಾಗದೆಯೂ ಇರಬಹುದು — ಎಂಬುದು ಜಿಜ್ಞಾಸೆಯ ಭಾಗವೇ ಹೊರತು ಅಂತಿಮ ನಿಷ್ಕರ್ಷೆಯಲ್ಲವೆಂದು ತಿಳಿದುಕೊಳ್ಳಬೇಕು.  

ತಾತ್ಪರ್ಯ:

ಭೇದವು ರೂಪದಲ್ಲಿರುತ್ತದೆ ಆದರೆ ತತ್ತ್ವದಲ್ಲಿ ಭೇದವಿರುವುದಿಲ್ಲ. ಎರಡು ಬೆರಳುಗಳನ್ನು ಸೇರಿಸಿದಾಗ ಮಾತ್ರ ಚಿಟಿಕೆ ಸಾಧ್ಯವಾಗುತ್ತದೆ. ಹಾಗಾದರೆ ‘ಒಬ್ಬನಿಂದ’ ಅರ್ಥಾತ್ ಭಗವಂತ ಒಂದು ರೂಪದಲ್ಲಿ ಮಾತ್ರ ಇದ್ದುಕೊಂಡರೆ ಅವನೊಬ್ಬನಿಂದ ಎಲ್ಲವೂ ಸಾಧ್ಯವಿಲ್ಲವೆಂಬ ಅರ್ಥವಲ್ಲ. ಒಬ್ಬ ಭಗವಂತನೇ ಅನೇಕ ರೂಪಗಳನ್ನು ತಾಳಬಲ್ಲನು ಅಥವಾ ಅನೇಕ ನಾಮರೂಪಗಳಲ್ಲಿ ಆವಿರ್ಭವಿಸಬಲ್ಲನು. ರೂಪಗಳಲ್ಲಿ ದ್ವೈತವಿದೆ;  ಪರಮತತ್ತ್ವದಲ್ಲಿ ಏಕತ್ವವಿದೆ.

ಉಪಸಂಹಾರ:

ಸಗ್ಗ ಸುಖಕ್ಕೆ ದಾರಿ ತಿಳಿದವರಿಲ್ಲ. ಆದರೆ ಇದು ಕಗ್ಗ ಸುಖದ ಸೆಲೆ; ಇಲ್ಲಿ ಕಗ್ಗದ ಸಾರ ಸೋರದಂತಹ ರಾಗಬದ್ಧವಾದ ಅನುರಣನಗಳಿವೆ — ಇದನ್ನು ಯಥೇಚ್ಛವಾಗಿ ಆಸ್ವಾದಿಸಬಹುದು. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗ ಸುಖ ದೊರಕುವಂತಾಗಲಿ. ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧವಾದ ಈ ಆಡಿಯೋ ವಿಡಿಯೋ ನಿಮ್ಮ ಮೈಮನಗಳನ್ನು ಸೂರೆಗೊಳ್ಳಬಲ್ಲುದೆಂಬ ನಿರೀಕ್ಷೆ ಲೇಖಕನದು.

#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻

ಕಗ್ಗಮಾಲಿಕೆ - ೬: ಧರ್ಮಜಿಜ್ಞಾಸೆ

 

ಕಗ್ಗಮಾಲಿಕೆ - ೬: ಧರ್ಮಜಿಜ್ಞಾಸೆ

ಪೀಠಿಕೆ:

ಕಾಣದ ವಸ್ತುಗಳೆಡೆಗಿನ ಭಯವೇ ಮನುಷ್ಯನಲ್ಲಿ ಭಕ್ತಿಯನ್ನುಂಟುಮಾಡುತ್ತದೆಯೇ ಎಂಬುದು ಮೂಲ ಜಿಜ್ಞಾಸೆ. ಅದು ಬರಿಯ ಭಯವಾಗಿದ್ದರೆ ಆ ದೇವತೆಗಳ ಪರಾಕ್ರಮಕ್ಕೆ ಸದಾ ಕಾಲ ಹೆದರುತ್ತಿರಬೇಕು. ಇದು ಜ್ಞಾನದ ದಾರಿಯಲ್ಲ. ಅದು ಬರಿಯ ಭಯವಾಗಿದ್ದರೆ ಅಲ್ಲಿ ಮನುಷ್ಯರ ಮತ್ತು ದೇವತೆಗಳ ನಡುವೆ ಪರಸ್ಪರ ಸ್ಪರ್ಧೆ ಏರ್ಪಟ್ಟು ಅಶಾಂತಿ ನೆಲೆಸೀತು. ಅಲ್ಲಿ ಧರ್ಮಕ್ಕೆ ಸ್ಥಾನವಿಲ್ಲ. ಇದು ಅಪೇಕ್ಷಣೀಯವಲ್ಲದ ಕಾರಣ ಧರ್ಮದ ನೆಲೆಯನ್ನು ಚಿಂತಿಸಿ ಕಂಡುಕೊಳ್ಳಬೇಕಾಗುತ್ತದೆ.

ಕಗ್ಗ:

ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೊ?|
ಸುರರಟ್ಟಹಾಸದಿನೆ ನರಭಕ್ತಿಯೊರಲೋ?||
ಪರಕಿಸುವರೇನವರ್ಗಳನ್ಯೋನ್ಯ ಶಕ್ತಿಗಳ|
ಧರುಮವೆಲ್ಲಿದರಲ್ಲಿ? ಮಂಕುತಿಮ್ಮ||



ವ್ಯಾಖ್ಯಾನ:

ದೇವತೆಗಳು ಮನುಷ್ಯರ ಕಲ್ಪನೆಯೋ  ಅಥವಾ ಆ ದೇವತೆಗಳ ಬಲವೇ ನಮ್ಮ ಭಕ್ತಿಗೆ ಮೂಲವಾಯಿತೋ ಎಂಬ ಗೊಂದಲ ಸಾಮಾನ್ಯ ಮನುಷ್ಯನದ್ದು. ಮನುಷ್ಯರು ಮತ್ತು ದೇವತೆಗಳ ಪರಸ್ಪರ ಪರೀಕ್ಷಿಸುತ್ತಿದ್ದಾರೆ ಎಂದು ತಪ್ಪಾಗಿ ತಿಳಿದುಕೊಂಡರೆ ಧರ್ಮದ ನೆಲೆ ಎಲ್ಲಿದೆಯೆಂದು ತಿಳಿಯುವುದು ಸಾಧ್ಯವಾಗದು.


ತಾತ್ಪರ್ಯ:

ಇದು ನಾಸ್ತಿಕತೆಯಲ್ಲ;  ಕಣ್ಣುಮುಚ್ಚಿ ಬೇಡಿಕೊಳ್ಳುವ ಭಕ್ತಿಯ ಪರಾಕಾಷ್ಠೆಯೂ ಇದಲ್ಲ. ಜಿಜ್ಞಾಸೆಯಿಂದ ತೊಡಗಿ ಅಂತಿಮ ಸತ್ಯದ ಆರಯ್ವಿಕೆಯತ್ತ ಒಯ್ಯುವ ಚಿಂತನೆಯ ಸೆಲೆಯಿದು. 

ಉಪಸಂಹಾರ:

ಸಗ್ಗ ಸುಖಕ್ಕೆ ದಾರಿ ತಿಳಿದವರಿಲ್ಲ. ಆದರೆ ಇದು ಕಗ್ಗ ಸುಖದ ಸೆಲೆ; ಇಲ್ಲಿ ಕಗ್ಗದ ಸಾರ ಸೋರದಂತಹ ರಾಗಬದ್ಧವಾದ ಅನುರಣನಗಳಿವೆ — ಇದನ್ನು ಯಥೇಚ್ಛವಾಗಿ ಆಸ್ವಾದಿಸಬಹುದು. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗ ಸುಖ ದೊರಕುವಂತಾಗಲಿ. ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧವಾದ ಈ ಆಡಿಯೋ ವಿಡಿಯೋ ನಿಮ್ಮ ಮೈಮನಗಳನ್ನು ಸೂರೆಗೊಳ್ಳಬಲ್ಲುದೆಂಬ ನಿರೀಕ್ಷೆಯೊಂದಿಗೆ ಇಲ್ಲಿರುವಾತ.

#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻

Friday, May 8, 2026

ಸುಡಾಪಿ ಕವಿತೆ

 ಸುಡಾಪಿ ಕವಿತೆ



ಇದೊಂದು ವಿಶಿಷ್ಟ ಮನೋಭಾವದ ಕುರಿತಾದ ಕವಿತೆ. ಸುಡಾಪಿ ಎಂದರೆ ಒಂದು ಮನಸ್ಥಿತಿಯೆಂದು ಬಲ್ಲವರು ಹೇಳಿದ್ದಾರೆ. "ನಮ್ಮ ಮತವೊಂದೇ ಮುಖ್ಯ — ನಮ್ಮ ಪ್ರವಾದಿಯೇ ಅಂತಿಮರು, ನಮ್ಮ ಪುಸ್ತಕದಿಂದ ಮಾತ್ರ ಉದ್ಧಾರ, ನಮ್ಮ ಮತವನ್ನು ಅನುಸರಿಸುವುದರಿಂದ ಮಾತ್ರ ಸ್ವರ್ಗದ ಬಾಗಿಲು ತೆರೆಯುವುದು" ಎಂದು ಎಲ್ಲಾ ಮತಸ್ಥರು ನಂಬುತ್ತಾರೆ. ಇದರಲ್ಲಿ ವಿಶೇಷವಿಲ್ಲ; ಆದರೆ ದೇಶದ ಸುರಕ್ಷತೆಗಿಂತ ದೀನ್ ಮುಖ್ಯ ಎನ್ನುವ ಮನಸ್ಥಿತಿ ಕಳವಳಕಾರಿ. ಈ ಕವಿತೆ ಅಂತಹ ಮನಸ್ಥಿತಿಯನ್ನು ವಿಶ್ಲೇಷಿಸುತ್ತದೆ. 

ಇದೊಂದು ಮತಕೇಂದ್ರಿತ ರಾಜಕೀಯ ಮನೋಭಾವ, ಉಮ್ಮಾ-ಆಧಾರಿತ ಗುರುತು ಮತ್ತು “ನಾನು ಜಿಹಾದಿ ಅಲ್ಲ” ಎಂಬ ನಕಾರಾತ್ಮಕ ಆತ್ಮರಕ್ಷಣೆಯ ವ್ಯಂಗ್ಯರೂಪ. ಇದನ್ನು ಕವಿತೆ ಪ್ರಶ್ನಿಸುವ ಬಗೆ ಇಂತಿದೆ:— "ನೀನು ಜಿಹಾದಿ ಅಲ್ಲವೆಂದರೂ, ಜಿಹಾದೀ ಮನೋವೃತ್ತಿಗೆ ನೆಲೆಯಾದ ಮೌಲ್ಯಗಳನ್ನು ಬೆಂಬಲಿಸುತ್ತೀಯಾ?". ಇದಕ್ಕೆ ದೊರಕಬಲ್ಲ ಉತ್ತರಗಳಲ್ಲಿ ನಾಗರಿಕ ಪ್ರಜ್ಞೆ ಉಳಿದುಕೊಳ್ಳುತ್ತದೆ.

ಆಗ ಅಲ್ಲೊಂದು ತತ್ತ್ವಸಂಘರ್ಷ ಏರ್ಪಡುತ್ತದೆ. ಅದೇನೆಂದರೆ "ಅನ್ಯ ದೇಶದಲ್ಲಿ ನೆಲೆಸಿರುವ ಹಿಂದು ನನಗೆ ಯಾರೂ ಅಲ್ಲ" ಎನ್ನಲಾಗುತ್ತದೆ. ಆದರೆ ಅದೇ ಉಸಿರಿನಲ್ಲಿ ಅಲ್ಲಿರುವ "ಮೊಯ್ಮೀನ್ ನನಗೆ ಬಂಧು" ಎನ್ನಲಾಗುತ್ತದೆ. ಇದು ಸಾಧಾರಣ ನೆಲೆಗಟ್ಟಿನ ನಾಗರಿಕ ಪ್ರಜ್ಞೆಯನ್ನು ಮೀರಿದ ನಿಲುವು. ಕಾಶ್ಮೀರ ನಮ್ಮದಲ್ಲ ಎಂದು ನಂಬುವುದು ಕೂಡ ಇದೇ ಸಾಲಿಗೆ ಸೇರುತ್ತದೆ. ಇಲ್ಲಿ ಕವಿತೆ ಬರಿಯ ವಿಡಂಬನೆಯ ಮೂಲಕ ಇದನ್ನು ತೋರಿಸಿಕೊಟ್ಟಿದೆಯಾದರೂ ಯಾರನ್ನೂ ಪ್ರಶ್ನಿಸುತ್ತಿಲ್ಲ.   

"ಬಾಮೀಯಾನದ ಬುದ್ಧನನ್ನು ಅವರು ಬೇಕಾದರೆ ಒಡೆಯುತ್ತಾರೆ — ಅದು ಅವರ ದೇಶ; ಅವರದೇ ಸಾಮ್ರಾಜ್ಯ. ಅವರ ಒಡೆತನದಲ್ಲಿರುವ ದೇಶದಲ್ಲಿ ಅವರು ಏನಾದರೂ ಮಾಡಿಕೊಳ್ಳುತ್ತಾರೆ. ಅದನ್ನು ಪ್ರಶ್ನಿಸುವ ಅಧಿಕಾರ ನಮಗಿಲ್ಲ" ಎನ್ನಲಾಗುತ್ತದೆ. ಆದರೆ ಬುದ್ಧ ಇಂಡಿಕ್ ಸಂಸ್ಕೃತಿಯ ಪ್ರಧಾನ ಭಾಗವೆಂಬುದನ್ನು ಮರೆಯಲಾಗುತ್ತದೆ. 

ಇಂಡ್ಯಾ ಜಾತ್ಯಾತೀತ — ಪರಿಸ್ಥಿತಿಯ ವ್ಯಂಗ್ಯದಿಂದ ರೂಪುಗೊಂಡ ಮರುವ್ಯಂಗ್ಯವಿದು. “ನಾಗರಿಕ ಹಕ್ಕು ಅಥವಾ ಪ್ರಜೆಯಾಗಿ ನನ್ನ ಹಕ್ಕು ಜಾತ್ಯಾತೀತವಾಗಿರಲಿ ಸೊತ್ತಿನ ಹಕ್ಕು ದೀನೀ ಆಗಲಿ” — ಎಂದರೆ "ನನಗೆ ಸಾಂದರ್ಭಿಕ ಜಾತ್ಯಾತೀತತೆ ಸಾಕು. ನಾಗರಿಕ ದಂಡ ಸಂಹಿತೆ ನನಗೆ ಶರೀಯತ್ ರೂಪದಲ್ಲಿ ಬೇಡ, ಆದರೆ ವೈಯಕ್ತಿಕ ಕಾನೂನು (ತಾಯಿತಂದೆಯರ ಆಸ್ತಿ ಅವರ ಮಕ್ಕಳಿಗೆ ದೊರಕುವ ವಿಚಾರವನ್ನು ಚರ್ಚಿಸುವ) ಶರೀಯತ್ ಆಗಿ ದೊರಕಲಿ." ಇಸ್ಲಾಮಿಸ್ಟ್ ರಾಜಕೀಯ ಧ್ವನಿಯನ್ನು ಪ್ರಶ್ನಿಸುವಾಗಲೂ ಇಸ್ಲಾಂ ಮತದ ಬಗೆಗಿನ ವಿಮರ್ಶೆಯೋ ಚರ್ಚೆಯೋ ಇಲ್ಲಿಲ್ಲ. ಇದೇ ಲೇಖಕನ "ಸೂಫಿ" ಕವಿತೆಯಲ್ಲಿಯೂ ಸಹ ಇದೇ ಶೈಲಿಯನ್ನು ಅಳವಡಿಸಲಾಗಿದೆ. ಸೂಫಿ ಬಾಹ್ಯ ಆಚರಣೆಗಳಲ್ಲಿರುವ ದ್ವಂದ್ವವನ್ನು ಎತ್ತಿ ತೋರಿಸುವಾಗಲೂ ಮತದ ವಿಮರ್ಶೆ ಅಲ್ಲಿಲ್ಲ ಎಂದು ಮನಗಾಣಬಹುದು. ಮತದ ಅನುಷ್ಠಾನದಿಂದ ದೊರಕಬಲ್ಲ ಮೌಲ್ಯ ನಿತ್ಯಾ ಮಾಡುವ ಸುಜೂದುಗಳಿಂದಲಾಗಿ ದೊರಕಿದೆಯೋ ಎಂದು ಸೂಫಿಯೊಬ್ಬನು ಪ್ರಶ್ನಿಸುವ ಶೈಲಿ ಅಲ್ಲಿನದಾಗಿತ್ತು.

"ಬೋಳ" ಎಂಬ ಪದ ಪ್ರಾದೇಶಿಕ ಸೊಗಡಿನ ಪ್ರಯೋಗವಾಗಿದ್ದು ವಿಡಂಬನೆಗಾಗಿ ಬಳಸಲಾಗಿದೆ. 
____________________________________________________________________________
ಕೇವಲ ಒಬ್ಬ ಸುಡಾಪೀ ನಾನು | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ಬೋಳ
ಸುಡಾಪಿ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ಬೋಳ
ಸುಡಾಪಿ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ ||

ಸುಡಾಪಿಯಾಗಿರುವೆ ಜಿಹಾದೀ ಅಲ್ಲ ನಾ
ಸುಡಾಪಿಯಾಗಿರುವೆ ಜಿಹಾದೀ ಅಲ್ಲ ನಾ | ಬೋಳ
ಸುಡಾಪೀ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ ||

ಪಾಕಿಸ್ಥಾನದ ಹಿಂದು, ನನ್ನ ಯಾರೂ ಅಲ್ಲವೊ ಜಂತು !
ಆದರೆ ಅಲ್ಲಿರುವಂಥ ಮೊಯ್ಮೀನ್ ನನಗೆ ಬಂಧು |
ಮೊಯ್ಮೀನ್ ನನಗೆ ಬಂಧು | ಬೋಳ
ಸುಡಾಪಿ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ ||

ಕಾಶಮೀರದ ಹಿಂದು, ನನ್ನ ಯಾರೂ ಅಲ್ಲವೊ ಜಂತು !
ಆದರೆ ಅಲ್ಲಿರುವಂಥ ಮೊಯ್ಮೀನ್ ನನಗೆ ಬಂಧು |
ಮೊಯ್ಮೀನ್ ನನಗೆ ಬಂಧು | ಬೋಳ
ಸುಡಾಪಿ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ ||

ಬಾಮೀಯಾನದ ಬುದ್ಧನ ನಾವು ಹೊಡೆದು ಒಡೆಯುವುದಂತೂ ಸತ್ಯಾ |
ನಮ್ಮ ಸಾಮ್ರಾಜ್ಯ ನಮ್ಮ ಹುಕೂಮತ್ ನಮ್ಮೆಣಿಕೇ ಎಂದಿಗು ಸತ್ಯಾ |
ದೀನಿ ಗುಲಾಮ ಸುಡಾಪೀ ನಾನು ಜಿಹಾದಿಯೆಂದೇತಕೆ ಕರೆದೀರೀ | ಬೋಳ
ಸುಡಾಪಿ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ ||

ಇದು ಜಾತ್ಯಾ-ತೀತಾ ಇಂಡ್ಯಾ | ಭಾರತವೆಂಬ ಹೆಸರನ್ನೇ  ಕೇಳಿದರಾಗದು, ಸತ್ಯಾ |
ಪ್ರಜೆಗಳ ಹಕ್ಕು ಜಾತ್ಯಾ-ತೀತಾ ಇರಲಿ ಸೊತ್ತಿನ ಹಕ್ಕು ದೀನೀ ಆಗಲಿ, ಸತ್ಯಾ |
ದೀನಿ ಗುಲಾಮ ಸುಡಾಪೀ ನಾನು ಜಿಹಾದಿಯೆಂದೇತಕೆ ಕರೆದೀರೀ | ಬೋಳ
ಸುಡಾಪಿ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ ||

Tuesday, May 5, 2026

ಮುಸ್ಲಿಂ ಅಸ್ಮಿತೆಯ ರಾಜಕೀಯ

 
ಮುನೀರ್ ಕಾಟಿಪಳ್ಳ ->

ಮುಸ್ಲಿಮರ ಜನಸಂಖ್ಯೆ ಶೇಕಡಾ 30 ಕ್ಕಿಂತ ಹೆಚ್ಚಿರುವ ಅಸ್ಸಾಂ, ಪಶ್ಚಿಮ ಬಂಗಾಳದಲ್ಲಿ ತೀವ್ರ ಮುಸ್ಲಿಮ್ ದ್ವೇಷಿ ಕಾರ್ಯಕ್ರಮದ ಬಿಜೆಪಿ ಭರ್ಜರಿ‌ ಬಹುಮತದಿಂದ ಗೆದ್ದಿದೆ. ಅಂದರೆ, ಮುಸ್ಲಿಮರ ಶೇಕಡಾವಾರು ಜನಸಂಖ್ಯೆ ಹೆಚ್ಚಿರುವುದು ಬಿಜೆಪಿಯ ವಿಭಜನೆಯ ರಾಜಕಾರಣಕ್ಕೆ ಅನುಕೂಲವಾಗಿ ಒದಗಿದೆ. 

ಕೇರಳದಲ್ಲಿ ಮುಸ್ಲಿಮ್ ಲೀಗ್ ಸ್ಪರ್ಧಿಸಿದ 27 ಸ್ಥಾನಗಳಲ್ಲಿ‌ 23 ಸ್ಥಾನ ಗೆದ್ದಿದೆ. ಕಾಂಗ್ರೆಸ್ ನೇತೃತ್ವದ ಯುಡಿಎಫ್ ಗೆ ಮುಸ್ಲಿಮ್ ಮತವನ್ನು ಪ್ರವಾಹದ ರೀತಿಯಲ್ಲಿ ಹರಿಸಿದೆ. ಅದೇ ಸಂದರ್ಭ ಬಿಜೆಪಿ ಪ್ರಥಮ ಬಾರಿಗೆ 3 ಸ್ಥಾನ ಗೆದ್ದಿದೆ. ಎಡರಂಗ ತೀವ್ರ ಹಿನ್ನಡೆ ಅನುಭವಿಸಿದೆ. ಗೆಲುವಿನ "ಸಂಭ್ರಮ" ದಲ್ಲಿ ಮುಸ್ಲಿಮ್ ಲೀಗ್ ಕಾರ್ಯಕರ್ತರು ತಮ್ಮ ಹಸಿರು ಧ್ವಜದೊಂದಿಗೆ ಸಿಪಿಐಎಂ ಕಚೇರಿಗಳಿಗೆ ನುಗ್ಗಿ ದಾಂಧಲೆಗೈದಿದ್ದಾರೆ. ಅಟ್ಟಹಾಸ ಮೆರೆದಿದ್ದಾರೆ.

ಭಾರತದ ಸಂಸದೀಯ ರಾಜಕಾರಣ, ಚುನಾವಣಾ ವ್ಯವಸ್ಥೆ ತೀರಾ ಸೂಕ್ಷ್ಮವಾದದ್ದು.ಜನ ಸಮುದಾಯ ಸಹಜವಾಗಿಯೆ ಸೆಕ್ಯುಲರ್ ಆಗಿರುವುದಿಲ್ಲ, ಆಗಿ ಉಳಿಯುವುದಿಲ್ಲ. ಅದಕ್ಕಾಗಿ ಹಗಲು ರಾತ್ರಿ ಶ್ರಮ ಪಡಬೇಕು. ಮುಸ್ಲಿಮ್ ಸಮುದಾಯಕ್ಕೆ ಈ ಸೂಕ್ಷ್ಮತೆ ಅರ್ಥ ಆಗಬೇಕು.






ಇದು ಮೇಲ್ನೋಟಕ್ಕೆ ಒಂದು ಸಮುದಾಯಕ್ಕೆ ನೀಡುವ ಎಚ್ಚರಿಕೆಯಂತೆ ಕಂಡರೂ ಇದು "ಮುಸ್ಲಿಂ ಅಸ್ಮಿತೆ"ಯನ್ನು ಪ್ರತ್ಯೇಕಿಸಿ ನೋಡಿ ಅವರಿಗಾಗಿ ಬರೆದ ಲೇಖನ. ಇಂತಹ ಲೇಖನಗಳನ್ನು ಬೇಕಾದರೆ ತಮ್ಮ ಮಜ್ಲಿಸ್ ಕಮಿಟಿಗಳಲ್ಲಿ ಬರೆದು ಓದಿಕೊಳ್ಳುವುದು ಬಿಟ್ಟು ಸಾರ್ವತ್ರಿಕವಾಗಿ ಹಂಚುವುದು ಪ್ರಜಾಪ್ರಭುತ್ವಕ್ಕೆ ಮಾರಕವೂ ಹೌದು.

"ಮುಸ್ಲಿಂ ಸಮುದಾಯಕ್ಕೆ ಈ ಸೂಕ್ಷ್ಮತೆ ಅರ್ಥವಾಗಬೇಕು" ಎಂದು ಹೇಳುವಾಗ, ಮುಸ್ಲಿಮರನ್ನು ದೇಶದ ಸಾಮಾನ್ಯ ನಾಗರಿಕ ಪ್ರಜ್ಞೆಯಿಂದ ಹೊರಗಿಟ್ಟು, ಅವರನ್ನೊಂದು ಪ್ರತ್ಯೇಕ 'ರಾಜಕೀಯ ಘಟಕ'ವಾಗಿ ನೋಡಲಾಗುತ್ತಿದೆ. ಇದು ಪ್ರಜಾಪ್ರಭುತ್ವದ ಮುಖ್ಯ ಆಶಯವಾದ "ಎಲ್ಲರೂ ಸಮಾನ ನಾಗರಿಕರು" ಎಂಬುದನ್ನು ಪರಿಗಣಿಸಿಲ್ಲ. 

ಮುಸ್ಲಿಮರನ್ನು ಕೇವಲ ಒಂದು ಮತಬ್ಯಾಂಕ್ ಅಥವಾ ಅಸ್ಮಿತೆಯಾಗಿ ನೋಡುವುದರಿಂದಲೇ ಅಂತರ ಹೆಚ್ಚಾಗುತ್ತಿದೆ. ಮುಸ್ಲಿಂ ಆದ ಒಂದೇ ಕಾರಣಕ್ಕೆ ಯಾರೂ ವಿಶಿಷ್ಟರಲ್ಲ, ಅವರದ್ದಾದ ಪ್ರತ್ಯೇಕ ನಿಲುವುಗಳನ್ನು ಅವರು ತೆಗೆದುಕೊಳ್ಳುವ ಅಗತ್ಯವಿಲ್ಲ. ಅವರು ಎಲ್ಲಾ ಭಾರತೀಯರಂತೆ ತಾವು ಎಂಬ ಮನೋಭಾವ ಬೆಳೆಸಿಕೊಂಡು ಮುಂದುವರಿದಾಗ ಮಾತ್ರ ಪ್ರತ್ಯೇಕತೆಯ ನಿಲುವುಗಳು ಗೌಣವಾಗಲು ಸಾಧ್ಯ. 

Tuesday, April 28, 2026

ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ

 ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ


ಪೀಠಿಕೆ:

ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳು ಸವೆದುಹೋದಾಗ ಮತ್ತು ಹೊಸ ಮೌಲ್ಯಗಳು ಇನ್ನೂ ರೂಪಗೊಳ್ಳದಿದ್ದಾಗ ಸಮಾಜವು ಒಂದು ರೀತಿಯ ಅಸ್ಥಿರತೆಗೆ ಒಳಗಾಗುತ್ತದೆ. ಡಿ.ವಿ.ಜಿ ಅವರು ಈ ಸ್ಥಿತಿಯನ್ನು 'ಪ್ರೇತ'ದ ರೂಪಕದ ಮೂಲಕ ಈ ಪದ್ಯದಲ್ಲಿ ಚಿತ್ರಿಸಿದ್ದಾರೆ.


ಕಗ್ಗ:

ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ|
ವಲೆವಂತೆ ಲೋಕ ತಲ್ಲಣಿಸುತಿಹುದಿಂದು||
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ|
ತಳಮಳಕೆ ಕಡೆಯೆಂದೊ?-ಮಂಕುತಿಮ್ಮ||



ವ್ಯಾಖ್ಯಾನ:

ಪ್ರೇತಾವಸ್ಥೆಯೆಂದರೆ ಮರಣದ ನಂತರ ಪ್ರಯಾಣದಲ್ಲಿರುವ ಆತ್ಮದ ಸ್ಥಿತಿ. ಈ ಭೂಮಿಯನ್ನು ಬಿಟ್ಟು ಎಲ್ಲಿಗೂ ಹೋಗದ ಪ್ರೇತದಂತೆ ಲೋಕ ತಲ್ಲಣಿಸುತ್ತಲಿದೆ. ಹಳೆಯ ಧರ್ಮ ಸತ್ತುಹೋಗಿದೆ; ಹೊಸದಾದ ಧರ್ಮವಿನ್ನೂ ಹುಟ್ಟಲಿಲ್ಲ. ಈ ತಳಮಳಕ್ಕೆ ಕೊನೆಯೆಂದು ಎಂಬುದು ತಿಳಿಯದಾಗಿದೆ ಎಂದಿದ್ದಾರೆ.


ದೇಹವನ್ನು ಬಿಟ್ಟ ಆತ್ಮಕ್ಕೆ ಪರಲೋಕದ ದಾರಿ ಸಿಗದಿದ್ದಾಗ ಅದು ಹೇಗೆ ಭೂಮಿಯ ಮೇಲೆಯೇ ಅಲೆಯುತ್ತದೆಯೋ, ಹಾಗೆಯೇ ಇಂದಿನ ಲೋಕವು ದಿಕ್ಕು ಕಾಣದೆ ತಲ್ಲಣಿಸುತ್ತಿದೆ. ನಾವು ಹಳೆಯ ಸಂಪ್ರದಾಯಗಳನ್ನು 'ಮೌಢ್ಯ'ವೆಂದು ಬಿಡುತ್ತಿದ್ದೇವೆ, ಆದರೆ ಆಧುನಿಕತೆಯ ಹೆಸರಿನಲ್ಲಿ ನಮಗೆ ಸಿಗುತ್ತಿರುವ ಭೌತಿಕ ಸುಖಗಳು ಅಂತರಂಗದ ಶಾಂತಿಯನ್ನು ನೀಡುತ್ತಿಲ್ಲ.


"ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ" ಎಂಬ ಸಾಲು ಅತ್ಯಂತ ಪ್ರಸ್ತುತ. ವಿಜ್ಞಾನವು ಹಳೆಯ ನಂಬಿಕೆಗಳನ್ನು ಪ್ರಶ್ನಿಸಿ ಸಾಯಿಸಿದೆ. ಆದರೆ ವಿಜ್ಞಾನ ಅಥವಾ ತರ್ಕವು ಮನುಷ್ಯನಿಗೆ ಬದುಕಿನ ಉದ್ದೇಶವನ್ನಾಗಲೀ ಅಥವಾ ನೈತಿಕ ಸ್ಥೈರ್ಯವನ್ನಾಗಲೀ ಇನ್ನೂ ನೀಡಲು ಸಾಧ್ಯವಾಗಿಲ್ಲ. ಈ ಎರಡರ ನಡುವಿನ 'ಶೂನ್ಯ'ವೇ ಇಂದಿನ ಲೋಕದ ತಳಮಳಕ್ಕೆ ಕಾರಣ.


ಇದು ಕೇವಲ ಧಾರ್ಮಿಕ ಬದುಕಿನ ಕುರಿತ ಮೌಖಿಕ ಉಪದೇಶವಲ್ಲ; ಬದುಕುವುದನ್ನು ಕ್ರಮಗೊಳಿಸಬೇಕಾದ ವಿಧಾನವೂ ಇಲ್ಲಿ ಪರಾಮರ್ಶಿಸಲ್ಪಟ್ಟಿದೆ. ಹಳೆಯ ತಲೆಮಾರಿನ ಸಂಯಮ ಮತ್ತು ಹೊಸ ತಲೆಮಾರಿನ ಆವೇಗಗಳೆರಡರ ನಡುವಣ ಸೆಣಸಾಟದಲ್ಲಿ ಸಿಲುಕಿದ ಸಮಾಜದ 'ಪ್ರೇತಾವಸ್ಥೆ'ಯನ್ನು ಡಿ.ವಿ.ಜಿ ಇಲ್ಲಿ ಪ್ರಶ್ನಿಸುತ್ತಿದ್ದಾರೆ.


ತಾತ್ಪರ್ಯ:

ಈ ಅತಂತ್ರ ಸ್ಥಿತಿ ಅಥವಾ ತಳಮಳಕ್ಕೆ ಕೊನೆಯೆಂದು? ಎಂಬ ಕವಿಯ ಪ್ರಶ್ನೆಯು ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುತ್ತದೆ. ನಾವು ಯಾವುದನ್ನು 'ಧರ್ಮ'ವೆಂದು ಸ್ವೀಕರಿಸಬೇಕು ಮತ್ತು ಈ ಗೊಂದಲದಿಂದ ಹೊರಬರುವುದು ಹೇಗೆ ಎಂಬುದು ಈ ಪದ್ಯದ ಅಂತರಾರ್ಥ.


ಉಪಸಂಹಾರ:

ಸಗ್ಗ ಸುಖಕ್ಕಾಗಿ ಹಾತೊರೆಯುವುದು ಜೀವನ ಎಂಬ ಭ್ರಮೆ ಲೋಕದಲ್ಲಿದೆ. ಆದರೆ ಇಲ್ಲಿರುವುದು ಕಗ್ಗ ಸುಖದ ರಸಾಸ್ವಾದನೆಗೊಂದು ಅಪರೂಪದ ಅವಕಾಶ. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗ ಸುಖ ದೊರಕುವಂತಾಗಲಿ. ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧವಾದ ಈ ಆಡಿಯೋ ವಿಡಿಯೋ ನಿಮ್ಮ ಮೈಮನಗಳನ್ನು ಸೂರೆಗೊಳ್ಳಬಲ್ಲುದೆಂಬ ನಿರೀಕ್ಷೆಯೊಂದಿಗೆ ಇಲ್ಲಿರುವಾತ.



#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻




ಕೃಷ್ಣಪ್ರಕಾಶ ಬೊಳುಂಬು

Saturday, April 25, 2026

ಕಗ್ಗಮಾಲಿಕೆ – ೪: ನಿರ್ವಚನಾತೀತ

 ಕಗ್ಗಮಾಲಿಕೆ – ೪: ನಿರ್ವಚನಾತೀತ


ಕಗ್ಗ:


ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ|

ಮಹಿಮೆಯಿಂ ಜಗವಾಗಿ ಜೀವವೇಷದಲಿ||

ವಿಹಿಪುದದೊಳ್ಳಿತೆಂಬುದು ನಿಸದವಾದೊಡಾ|

ಗಹನ ತತ್ತ್ವಕ್ಕೆ ಶರಣೊ-ಮಂಕುತಿಮ್ಮ|| 


ವ್ಯಾಖ್ಯಾನ:

ಇದೆಯೋ ಇಲ್ಲವೋ ಎಂದು ತಿಳಿಯಲಾಗದ ವಸ್ತುವೊಂದು ಲೋಕದಲ್ಲಿ ಒಳ್ಳೆಯದನ್ನು ಮಾಡುತ್ತದೆಂದು ನಿನಗೆ ನಿಶ್ಚಯವಾದರೆ ಆ ಗಹನ ತತ್ತ್ವಕ್ಕೆ ಶರಣಾಗು.


ತಾತ್ಪರ್ಯ:

ಎಲ್ಲವನ್ನೂ ಒಳಗೊಂಡ ಎಲ್ಲದರ ಹಿಡಿವಡೆದ ಎಲ್ಲದಕ್ಕೂ ಮಿಗಿಲಾದ ಚೈತನ್ಯವೊಂದಿದೆ. ಅದು ಗಹನವಾದ ತತ್ತ್ವ; ಅದು ವಿವರಣೆಗೆ ನಿಲುಕದಂತಹುದು. ಅದು ನಿನಗೆ ಒಳಿತನ್ನು ಮಾಡುವುದೆಂದು ನಿಶ್ಚಯವಾದರೆ ಚಿಂತನೆಗೆ ನಿಲುಕದ ಆ ಪರಮತ್ತ್ವಕ್ಕೆ ಶರಣಾಗು. ಇದು ಈ ಕಗ್ಗದ ತಾತ್ಪರ್ಯ.


ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗದ ಭಾವ ಗ್ರಾಹ್ಯವಾಗಬಲ್ಲುದು. ಅನುರಣನಗಳಲ್ಲಿ ಕಗ್ಗದ ಕಂಪು ಮೈದೋರುವಂತಾಗಲಿ.


#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻




ಕೃಷ್ಣಪ್ರಕಾಶ ಬೊಳುಂಬು

ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ

ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ ಈಗ ಸಣ್ಣ ಬದಲಾವಣೆಗಳೊಂದಿಗೆ "ಕನ್ನಡ ಮೀಡಿಯಂ ಕಾಸರಗೋಡು" ಯೂಟ್ಯೂಬ್ ಚಾನೆಲಿನಲ್ಲಿ ನಾಲ್ಕು ಭಾಷೆಗಳಲ್...