Saturday, November 8, 2025

ರಮಣ ಮಹರ್ಷಿಗಳ "ನಾನು-ಯಾರು" ಚಿಂತನೆ

 ಏಕಾಣ್ಮ ಪಂಚಕಂ - 3


ರಮಣ ಮಹರ್ಷಿಗಳ "ನಾನು-ಯಾರು" ಚಿಂತನೆ



ತನ್ನುಳ್ ತನುವಿರುಕ್ಕ ತಾನಾ ಜವುಡಲನ್,

ತನ್ನುಳ್ ಇರುಪ್ಪದಾ ತಾನುಣ್ಣುಮ್ — ಅನ್ನವನ್,

ಚಿತ್ತಿರತ್ತಿನ್ ಉಳ್ಳುಳದ  ಚಿತ್ತಿರತ್ತುಕ್ಕಾಧಾರ

ವಸ್ತಿರಮೆನ್ಱೆಣ್ಣುವಾನ್ ಪೋಲ್ವಾನ್ — ವಸ್ತುವಾಂ.


ತನ್ನೊಳಗೆ ತನುವಿರುತ ತಾನೇ ಜಡದೊಡಲನು, 

ತನ್ನೊಳಗಡರ್ದ ತಾನುಣ್ಣುವನ್ನವನು 

ಪಟದೊಡಲಡಕ ಪಟಲವದಕ್ಕಾಧಾರ, 

ವಸ್ತುವೆನೆ ವಸ್ತ್ರಮನೆಣಿಪನಂ ಪೋಲ್ವನು


ಪದವಿಂಗಡಣೆ:

[ಜಡದ+ಒಡಲನು] [ತನ್ನೊಳಗೆ+ಅಡರ್ದ] [ತಾನು+ಉಣ್ಣುವ+ಅನ್ನವನು] [ಪಟದ+ಒಡಲು+ಅಡಕ] [ಪಟಲ+ಅದಕ್ಕೆ+ಆಧಾರ] [ವಸ್ತ್ರಂ+ಎಂದು+ಎಣಿಪನಂ]


ಅರ್ಥಗಳು:

ತನು = ಶರೀರ, ಜಡ = ನಿರ್ಜೀವ, ಜಡದೊಡಲು = ನಿರ್ಜೀವವಾದ ಶರೀರ, ಉಣ್ಣುವ ಅನ್ನ = ತನ್ನೊಳಗೆ ಪ್ರಕಟಗೊಳ್ಳುವ ಚೈತನ್ಯ, ಪಟ = (ತೆರೆಯ ಮೇಲೆ ಪ್ರಕಟಗೊಳ್ಳುವ) ಚಿತ್ರ, ಪಟಲ = ಪರದೆ, ವಸ್ತು = ಪರಮ ತತ್ತ್ವ, ವಸ್ತುವೆನೆ = ವಸ್ತುವೆಂಬಂತೆ, ವಸ್ತ್ರ = ಬಟ್ಟೆ, ಪೆರಮೆ = ಭ್ರಮೆ


ವ್ಯಾಖ್ಯಾನ:

ತನ್ನೊಳಗೆಯೇ ಶರೀರವು ನೆಲೆಸಿರುವಾಗಲೂ ನಿರ್ಜೀವವಾದ ಆ ಶರೀರವೇ ತಾನಲ್ಲ - ತನ್ನೊಳಗೆ ಪ್ರಕಟಗೊಳ್ಳುವ ಚೈತನ್ಯವು ತಾನೆಂಬುದನ್ನು ಅರಿಯದವನು ಪಟವು ನಮ್ಮ ಕಣ್ಣಿನ ಮುಂದೆ ಮೂಡಿಕೊಳ್ಳಲು ಆಧಾರವಾದ ಪಟಲವೆಂಬ ವಸ್ತ್ರವನ್ನೇ ಪರಮ ವಸ್ತುವೆಂದು ಪೆರಮೆಗೊಳ್ಳುವವನಂತೆ.


ತಾತ್ಪರ್ಯ:

ರಮಣ ಮಹರ್ಷಿಗಳು ಆತ್ಮವು ಶರೀರದ ಒಳಗೆ ಎಲ್ಲಿಯೋ ಇದೆಯೆಂಬುದು ಭ್ರಮೆ ಎನ್ನುತ್ತಾರೆ. ಆತ್ಮವು ಶರೀರದ ಒಳಗೆ ಎಲ್ಲಿಯೋ ಇಲ್ಲ, ಅದರ ಬದಲಾಗಿ ಆತ್ಮದೊಳಗೆ ಶರೀರವಿದೆಯೆಂದು ತಿಳಿಯಬೇಕೆಂಬುದು ಈ ಮಾತಿನ ಅರ್ಥ. ಹಾಗಾಗಿ ಆತ್ಮವು ಎದೆಯಲ್ಲಿದೆಯೋ ಮೆದುಳಿನಲ್ಲಿದೆಯೋ ಎಂಬ ಚಿಂತನೆಗೆ ಅವಕಾಶವಿಲ್ಲದಂತೆ ಆತ್ಮದೊಳಗೆಯೇ ಶರೀರವಿದೆ ಎನ್ನುತ್ತಾರೆ. ಸಚ್ಚಿದಾನಂದ ಸ್ಥಿತಿಯಾದ ಆ ಸಹಜ ಸ್ಥಿತಿಯ ಒಳಗೆಯೇ ಶರೀರವಿದೆಯೆನ್ನುತ್ತ ಧ್ಯಾನಿಸಬೇಕು ಎಂದು ಮೂರನೆಯ ಈ ಚರಣದಲ್ಲಿ ರಮಣ ಮಹರ್ಷಿಗಳು ಸ್ಪಷ್ಟಪಡಿಸುತ್ತಾರೆ. ಶರೀರದ ಯಾವುದೋ ಒಂದು ಭಾಗವನ್ನು ಕೇಂದ್ರೀಕರಿಸಿ ಮಾಡುವ ಧ್ಯಾನವು ಸ್ವರೂಪ ಧ್ಯಾನವೆಂದಿನಿಸಿಕೊಳ್ಳದು ಎಂದು ರಮಣ ಮಹರ್ಷಿಗಳು ಸಾರುತ್ತಾರೆ. ಆತ್ಮವು ಅಚೇತನವಾದ ಶರೀರದ ಒಳಗೆ ಇದೆಯೆಂದು ಭಾವಿಸುವವನು ಚಲಚ್ಚಿತ್ರವೊಂದಕ್ಕೆ ಆಧಾರವಾಗಿರುವ ಪರದೆ ಆ ಚಿತ್ರದೊಳಗಿದೆಯೆಂದು ಪೆರಮೆಗೊಳ್ಳುವವನಂತೆಯೇ ಹೆಡ್ಡನಾದವನು ಎಂಬುದು ಮಹರ್ಷಿಗಳ ಅಭಿಮತ. 


ಪಟಲವು ಪಟ ನಮ್ಮ ಕಣ್ಣಿನ ಮುಂದೆ ಮೂಡಿಕೊಳ್ಳಲು ಆಧಾರವಾಗಿದೆ. ಅದೇ ರೀತಿಯಲ್ಲಿ -  ಶರೀರವೂ ಮಿಕ್ಕುಳಿದುವೂ ಕಾಣಿಸಿಕೊಳ್ಳಲು ಆತ್ಮವೇ ಆಧಾರವಾಗಿದೆ. ಆದುದರಿಂದ ನಮ್ಮಲ್ಲಿ ಆಳವಾಗಿ ಬೇರೂರಿರುವ ಅಜ್ಞಾನದಿಂದಲಾಗಿ ನಾವು ಈ ಶರೀರದ ಮಿತಿಯೊಳಗೆ ಬಂದಿಗಳಾಗಿದ್ದೇವೆಂದೂ ಈ ಶರೀರವೇ 'ನಾನು' ಎಂದೂ ಕಂಡರಿಯುತ್ತೇವೆ.


ಆತ್ಮವಿಚಾರದ ಉದ್ದೇಶವು ನಮ್ಮನ್ನು ನಾವು ನಿಜವಾಗಿಯೂ ಹೇಗಿದ್ದೇವೆಂದು ತಿಳಿದುಕೊಳ್ಳಲು ಅನುವು ಮಾಡಿಕೊಡುವುದು ಮತ್ತು ಆ ಮೂಲಕ ಈ ಶರೀರದೊಳಗೆ ನಾವು ಬಂದಿಗಳಾಗಿದ್ದೇವೆಂದು ಕಂಡರಿಯುವಂತೆ ಮಾಡುವ ಅಜ್ಞಾನವನ್ನು ನಾಶನಗೊಳಿಸುವುದು. ಈ ಶರೀರದ ಮೇಲಣ ಯಾವುದೇ ಬಿಂದುವಿನ ಬಗೆಗೆ ಧ್ಯಾನಿಸುತ್ತ ಅದು ನಮ್ಮ ಆತ್ಮದ ನೆಲೆದಾಣವೆಂದು ಕಲ್ಪಿಸಿಕೊಳ್ಳುವುದು ಆತ್ಮವಿಚಾರದ ಅಭ್ಯಾಸವೆನಿಸಿಕೊಳ್ಳದು. ನಮ್ಮ ಶರೀರವು ಕಲ್ಪಿತವಂತೆ; ನಮ್ಮ ಮನಸ್ಸಿನಲ್ಲಿ ಮಾತ್ರ ಇರುವ ಒಂದು ಆಲೋಚನೆಯಂತೆ; ನಾವು ಕನಸಿನಲ್ಲಿ 'ನಾನು' ಎಂದು ಕಂಡರಿಯುವ ಶರೀರದಂತೆ - ಅದು ನಮ್ಮ ಕಲ್ಪನೆಯಲ್ಲಿ ಮಾತ್ರ ಇದ್ದುಕೊಂಡಿದೆ. ನಾವು ಅದನ್ನು ಗಮನಿಸುವುದರಿಂದ ಮಾತ್ರ ಆ ಬಗೆಯಲ್ಲಿ ಅದನ್ನು ನಾವು ಅರಿಯುತ್ತೇವೆ. ಆದುದರಿಂದ ನಾವು ಶರೀರದ ಬಗೆಗೆ ಯಾವುದೇ ರೀತಿಯಲ್ಲಿ ಧ್ಯಾನ ಮಾಡಿದರೆ - ಅದರೆಡೆಗಿನ ನಮ್ಮ ನೋಟ ವಾಸ್ತವಿಕ ನೆಲೆಯದ್ದಾಗಿರದು ಮತ್ತು ಆ ಮೂಲಕ ಆ ಬಗೆಯ ಅರಿವನ್ನುಂಟುಮಾಡುವ ಅಜ್ಞಾನವನ್ನೇ ಶಾಶ್ವತವೆಂದು ಪೆರಮೆಗೊಳ್ಳುತ್ತೇವೆ. ನಾವು ನಿಜವಾಗಿಯೂ ಯಾರೆಂದು ತಿಳಿದುಕೊಳ್ಳಲು ಈ ಶರೀರದ ಮೇಲಣ ಮತ್ತು ಹೊರಗಣ ಪ್ರತಿಯೊಂದು ಆಲೋಚನೆ ಮತ್ತು ವಸ್ತುವಿನಿಂದ ನಮ್ಮ ಗಮನವನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡು ಅದನ್ನು ನಮ್ಮ ಇರುವಿಕೆಯ ಅವಬೋಧವೆನಿಸಿಕೊಂಡ 'ನಾನು' ಎಂಬುದರತ್ತ ಕೇಂದ್ರೀಕರಿಸಬೇಕು.


ಕೃಷ್ಣಪ್ರಕಾಶ ಬೊಳುಂಬು


No comments:

Post a Comment

ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ

ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ ಬ್ರಿಟಿಷರಿಂದ ಆರಂಭಗೊಂಡಿತೇ ಹೊರತು ಕೇವಲ ಜಾತಿ ವ್ಯವಸ್ಥೆಯಿಂದ ಸೃಷ್ಟಿಯಾಯಿತೆನ್ನುವುದು ಪೆರಮೆ. ದಮನಕಾರಿ ಬ್ರಿಟಿಷ್ ಆಡಳಿತ ನೀತಿಗಳು...