ಏಕಾಣ್ಮ ಪಂಚಕಂ - 5
ರಮಣ ಮಹರ್ಷಿಗಳ “ನಾನು–ಯಾರು” ಚಿಂತನೆಯ ಉಪಸಂಹಾರ
ಮೌನ ವ್ಯಾಖ್ಯಾನದಿಂದ ಪ್ರಕಟಗೊಂಡ ಪ್ರರಬ್ರಹ್ಮ ತತ್ತ್ವ
---------------------------------------------------------------------------
ಎಪ್ಪೋದುಂ ಉಳ್ಳದವ್ ಏಕಾಣ್ಮ ವಸ್ತುವೇ
ಅಪ್ಪೋದು ಅವ್ವಸ್ತುವೈ ಆದಿಗುರು ಚೆಪ್ಪಾದು
ಚೆಪ್ಪಿ ತೆರಿಯುಮಾ ಚೆಯ್ದನರೇಲ್ ಎವರ್
ಚೆಪ್ಪಿ ತೆರಿವಿಪ್ಪರ್ ಚೆಪ್ಪುಗ ಎನ ಇಪ್ಪೋದವ್
ಆವಗವುಮಿರ್ಪುದೆನೆ ಉಣ್ಮೆಯೆನಿಪ್ಪುದನು
ಅಂದಿರ್ದುದನಾ ಆದಿಗುರುವರುಹಿರದೆ;
ಅರುಹಿಯುಮರಿವುದೆ ಅರುಹಲುಮಾರ್ಪುದೆ
ಅರುಹಿ ಅರಿಯಗೊಡುವವರಾರು - ಇಂದೀಗ
ಪದವಿಂಗಡಣೆ:
[ಆವಗವುಂ+ಇರ್ಪ+ಉದು+ಎನೆ] [ಉಣ್ಮೆ+ಎನಿಪ್ಪ+ಉದನು] [ಅಂದು+ಇರ್ದುದಂ+ಆ] [ಆದಿಗುರು+ಅರುಹಿ+ಇರದೆ] [ಅರುಹಿಯುಂ+ಅರಿವುದೆ] [ಅರಿಯಗೊಡುವವರ್+ಆರು] [ಇಂದು+ಈಗ]
ಅರ್ಥಗಳು:
ಆವಗವುಂ = ಯಾವಾಗಲೂ, ಇರ್ಪ = ಇರುವ, ಎನೆ = ಎಂಬ, ಉಣ್ಮೆ = ಇರುವಿಕೆ, ಆದಿಗುರು = ದಕ್ಷಿಣಾಮೂರ್ತಿ, ಅರುಹು = ಅರಿಯಿಸು, ಇಂದು = ಈ ದಿನ, ಈಗ = ಈ ಹೊತ್ತು
ವ್ಯಾಖ್ಯಾನ:
ಯಾವಾಗಲೂ ಇರುವಂತಹುದಾದ ಉಣ್ಮೆಯೆನಿಸಿಕೊಂಡುದನ್ನು ಅರಿಯಬೇಕು. ಅಂದು ಆ ಆದಿಗುರು ದಕ್ಷಿಣಾಮೂರ್ತಿ ಆ ಹೊತ್ತು ಇದ್ದುದನ್ನು ಮಾತಿನಿಂದ ಹೇಳಿರಲಿಲ್ಲ. ಯಾಕೆಂದರೆ ಅದು ವಾಗಾಡಂಬರಗಳನ್ನು ಮೀರಿದುದು - ಅದು ಮಾತಿನಿಂದ ಹೇಳಿ ತಿಳಿಯಿಸುವ ವಿಷಯವಲ್ಲ. ಮಾತಿನಿಂದ ವಿವರಿಸಿದರೆ ಅದು ಅರಿವಿಗೆ ಅರಿವಿಗೆ ನಿಲುಕಬಲ್ಲುದೇ ಅಥವಾ ಅದನ್ನು ಮಾತಿನಿಂದ ವಿವರಿಸಲಿಕ್ಕೆ ಸಾಧ್ಯವಿದೆಯೇ? - ಈ ದಿನ, ಈ ಹೊತ್ತು ಅದನ್ನು ಅದನ್ನು ವಿವರಿಸಬಲ್ಲವರು ಯಾರಿದ್ದಾರೆ?!
ತಾತ್ಪರ್ಯ:
ಇದು ರಮಣ ಮಹರ್ಷಿಗಳ ಉಪದೇಶದ “ನಾನು–ಯಾರು” ಚಿಂತನೆಯ ಉಪಸಂಹಾರ. ಆತ್ಮಸ್ವರೂಪವೇ ನಿತ್ಯ-ನಿರಂತರವಾದುದು. ಅದು ಹೊಸದಾಗಿ ಅನುಭವಕ್ಕೆ ಬರುವ ಯಾವುದೋ ವಸ್ತುವಲ್ಲ. ಅದನ್ನು ಹೇಳಲಾಗದು, ಉಪದೇಶಿಸಲಾಗದು - ಯಾಕೆಂದರೆ ಅದು ನಿನ್ನ “ಸಾಕ್ಷಿಭಾವ”ವೇ ಆಗಿದೆಯೆಂದು ಬೋಧಿಸುತ್ತಾರೆ. ಗುರುವಿನ ಮಾತಿನಂತೆ - “ಅದು ನೀನೇ” ಎಂಬುದು ಉಪದೇಶದ ಸಾರ. ಆದರೆ ನಿಜವಾದ ಅರಿವು ಮೌನವಾದ ಉಪದೇಶದಲ್ಲಿ ಒಡಮೂಡುತ್ತದೆ. ವಾಕ್ಯಗಳು ಅಲ್ಲಲ್ಲಿ ತೋರಿಬರುವಂತೆ ಆಂತರಿಕ ಪ್ರೇರಣೆಗಳಾಗಿ ಜಾಗೃತಗೊಳ್ಳುತ್ತದೆ. ರಮಣ ಮಹರ್ಷಿಗಳು “ಏಕಾಣ್ಮ ಪಂಚಕಂ” ಸ್ತೋತ್ರದ ಐದನೆಯ ಚರಣದಲ್ಲಿ ಅದ್ವೈತಾನುಭವದ ಚರಮ ಸ್ಥಿತಿಯಾದ ಆತ್ಮಸಾಕ್ಷಾತ್ಕಾರವನ್ನು ತೋರಗೊಟ್ಟಿದ್ದಾರೆ.

No comments:
Post a Comment