Showing posts with label IndicCivilization. Show all posts
Showing posts with label IndicCivilization. Show all posts

Thursday, July 16, 2026

ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ

ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ ಈಗ ಸಣ್ಣ ಬದಲಾವಣೆಗಳೊಂದಿಗೆ "ಕನ್ನಡ ಮೀಡಿಯಂ ಕಾಸರಗೋಡು" ಯೂಟ್ಯೂಬ್ ಚಾನೆಲಿನಲ್ಲಿ ನಾಲ್ಕು ಭಾಷೆಗಳಲ್ಲಿ ದೃಶ್ಯನಿರೂಪಣೆಯೊಂದಿಗೆ ಪ್ರಸ್ತುತಿಗೊಳ್ಳುತ್ತಿದೆ.


ಕನ್ನಡ


                       ಹಿಂದಿ



 ಮಲೆಯಾಳ


ತಮಿಳು


ದಾಂಪತ್ಯ ಪ್ರಣಯವೇ ಈ ಕವಿತೆಯ ವಿಷಯವಸ್ತು. ನಿತ್ಯದ ಬಡಿದಾಟಗಳ ಮತ್ತು ಅದರೊಂದಿಗಿನ ಸಿಡಿಮಿಡಿಗಳನ್ನು ಮತ್ತು ಎದೆಯಾಳದಲ್ಲಿ ಸೆಲೆಯಾದ ಪ್ರಣಯದ ಇರವನ್ನು ಸೂಚಿಸುವ ಕವಿತೆಯಿದು. ಪ್ರತಿ ದಿನದ ಅಗಲಿಕೆಯಲ್ಲೂ ಪ್ರತಿ ಕ್ಷಣದ ಸಿಡಿಮಿಡಿಯಲ್ಲೂ ಪ್ರಣಯವೊಂದಿರುತ್ತದೆ; ಅದು ಮೌನದೊಳಗೆ ಮಾತಾಗಿರುತ್ತದೆ — ಎದೆಯಾಳದಲ್ಲಿ ಬತ್ತದ ಸೆಲೆಯಾಗಿರುತ್ತದೆ. ದಿನನಿತ್ಯದ ಸಣ್ಣಪುಟ್ಟ ಜಗಳಗಳು, ಬಡಿದಾಟಗಳ ನಡುವೆಯೂ ದಿನವೂ ಅರಳುವ ಹೂವಿನಂತೆ ಪರಸ್ಪರ ಪ್ರೀತಿ ದಿನದಿಂದ ದಿನಕ್ಕೆ ಇಮ್ಮಡಿಸುತ್ತಲಿದ್ದು ಹೃದಯದ ಗೂಡಿನಲ್ಲಿ ಶಾಶ್ವತವಾಗಿ ಉಳಿಯುತ್ತದೆ.


ಹದಿನಾಲ್ಕು ವರ್ಷಗಳ ಹಿಂದಿನ 'ಪ್ರಣಯ' ಕವಿತೆ

ಇದರ ಯಥಾಪ್ರತಿಯನ್ನು ಸಂಪದ ಕನ್ನಡ ತಾಣದಲ್ಲಿ ಓದಬಹುದು.  


ಪ್ರತಿ ದಿನದ ಅಗಲಿಕೆಯಲ್ಲೂ

ಪ್ರತಿ ಕ್ಷಣದ ಸಿಡಿಮಿಡಿಯಲ್ಲೂ

ಪ್ರಣಯವೊಂದು ಇದ್ದೇ ಇರದೇ

ಎದೆಯೊಳೊಂದು ಸೆಲೆಯಾಗಿ


ಪ್ರತಿ ಮೃದುಲ ಸ್ಪರ್ಶದಲ್ಲೂ

ಹರಿವ ಕಂಬನಿಯಲ್ಲೂ

ಅರಿಯದೊಂದು ಹೆದರಿಕೆಯಲ್ಲೂ

ಪ್ರೀತಿಯಿದ್ದೇ ಇರದೇ ಮರ್ಮಗಳನು ತಿಳಿಯದೆ


ಅನುದಿನದ ಬಡಿದಾಟದಲೂ

ಅರಳುತ್ತಿರುವ ಹೂವಿನಂತೆ

ಇಮ್ಮಡಿಸುತಿದ್ದೇ ಇರದೇ

ಪ್ರೀತಿ ಎದೆಯ ಗೂಡಿನೊಳು


ಹೊಸ ರೂಪದ 'ದಾಂಪತ್ಯ ಪ್ರಣಯ' ಕವಿತೆ

ಪ್ರತಿ ದಿನದ ಅಗಲಿಕೆಯಲ್ಲೂ

ಪ್ರತಿ ಕ್ಷಣದ ಸಿಡಿಮಿಡಿಯಲ್ಲೂ

ಪ್ರಣಯವೊಂದು ಇದ್ದೇ ಇರದೇ

ಎದೆಯೊಳೊಂದು ಸೆಲೆಯಾಗಿ

ಹೇಳಿರದ ಗುಟ್ಟುಗಳಿರದೇ

ಮೌನದೊಳಗೆ ಮಾತಾಗಿ 


ಪ್ರತಿ ಮೃದುಲ ಸ್ಪರ್ಶದಲ್ಲೂ

ಹರಿಯುತಿಹ ಕಂಬನಿಯಲ್ಲೂ

ಪ್ರೀತಿಯೊಂದು ಇದ್ದೇ ಇರದೇ

ಮರ್ಮಗಳನು ತಿಳಿಯದೆ 

ಹೇಳಿರದ ಗುಟ್ಟುಗಳಿರದೇ

ಮೌನದೊಳಗೆ ಮಾತಾಗಿ


ಅನುದಿನದ ಬಡಿದಾಟದಲೂ

ನಿತ್ಯ ಅರಳುವ ಹೂವಿನಂತೆ

ಇಮ್ಮಡಿಸುತ ಇದ್ದೇ ಇರದೇ

ಪ್ರೀತಿ ಎದೆಯ ಗೂಡಿನೊಳು

ಹೇಳಿರದ ಗುಟ್ಟುಗಳಿರದೇ

ಮೌನದೊಳಗೆ ಮಾತಾಗಿ


"ಹೇಳಿರದ ಗುಟ್ಟುಗಳಿರದೇ" ಮತ್ತು "ಮೌನದೊಳಗೆ ಮಾತಾಗಿ" ಎರಡು ಸಾಲುಗಳನ್ನು ಇಲ್ಲಿ ಹೊಸದಾಗಿ ಸೇರಿಸಲಾಗಿದೆ.


ಹಾಡುವಿಕೆ ಮತ್ತು ದೃಶ್ಯನಿರೂಪಣೆ

ಕವಿತೆಯ ದೃಶ್ಯನಿರೂಪಣೆ ಮತ್ತು ಹಾಡುವಿಕೆ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಮೂಡಿಬಂದಿದೆ. ಕೃತಕ ಬುದ್ಧಿಮತ್ತೆಗೆ ರಾಗ ಸಂಯೋಜನೆಗೆ ಆದೇಶಿಸುವಾಗ "ಬಯಕೆಗಳನ್ನು ಸೂಕ್ಷ್ಮವಾಗಿ ಉದ್ದೀಪಿಸಬೇಕು; ಉದ್ರೇಕಿಸಿ ಪ್ರಚೋದಿಸಬಾರದು" ಎಂದು ಕಟ್ಟುಪಾಡು ವಿಧಿಸಿದ್ದೆ. ನಾನೊಬ್ಬ ಬರಹಗಾರನಾಗಿ ಇದು ರಾಗ ಸಂಯೋಜನೆಗೆ ಪೂರಕವಾಗಿ ಮೂಡಿದೆಯೆಂಬ ನಂಬಿಕೆಯಲ್ಲಿದ್ದೇನೆ.   


ಹಾಡುವಿಕೆ

ಹಾಡುವಿಕೆಯನ್ನು ಸುನೋ ಎಐಯ ಉಚಿತ ಸ್ತರದಲ್ಲಿ ಮೂಡಿಸಲಾಯಿತು. ಸುನೋ ಎಐಗಾಗಿ ವಿಶೇಷ ಪ್ರೋಂಪ್ತ್ ಬರೆಯಲಿಕ್ಕೆ ಜೆಮಿನಿ, ಕ್ಲೌಡ್ ಮತ್ತು ಚಾಟ್‍ಜಿಪಿಟಿಗಳ ಬಳಕೆಯಾಗಿದೆ. ಕೆಲವು ಹಾಡುಗಳು ನಿರೀಕ್ಷೆಗೆ ತಕ್ಕನಾಗಿ ಇರಲಿಲ್ಲ. ಅಂಥವುಗಳನ್ನು ನಿರ್ದಾಕ್ಷಿಣ್ಯವಾಗಿ ತಳ್ಳಬೇಕಾಯಿತು. ಇನ್ನು ಕೆಲವು ಹಾಡುಗಳಲ್ಲಿ ಉಚ್ಚಾರದೋಷಗಳಿದ್ದುವು.  ಉಚ್ಚಾರದೋಷಗಳನ್ನು ಪೂರ್ಣವಾಗಿ ಇಲ್ಲದಾಗಿಸಲು ಸಾಧ್ಯವಿಲ್ಲದಿದ್ದರೂ ಹೆಚ್ಚುವರಿಯಾಗಿ ಮೂಡಿದ ಉಚ್ಚಾರಣೆಗಳನ್ನು ಆಡಿಯೋ ಎಡಿಟರ್ ಸಹಾಯದಿಂದ ಎಡಿಟ್ ಮಾಡಬೇಕಾಯಿತು. 


ದೃಶ್ಯನಿರೂಪಣೆ

ಹಾಡುಗಳ ಹತ್ತು ಸೆಕೆಂಡ್ ಕಾಲಾವಧಿಯ ಅಣಿಮೇಷನ್ ಚಿತ್ರಗಳನ್ನು ಜೆಮಿನಿ ಎಐಯ ಸಹಾಯದಿಂದ ಮೂಡಿಸಲಾಯಿತು. ಜೆಮಿನಿ ಎಐಯಿಂದ ಮೂಡುವ ವಿಡಿಯೋಗಳಲ್ಲಿ ಜೆಮಿನಿ ಲೋಗೋ ಇರುತ್ತದೆ. ಇದರಲ್ಲಿ ಲೋಗೋ ಕಾಣಿಸದಂತೆ ಮಾಡಲು ಪುನಃ ಎಡಿಟರ್ ಸಹಾಯ ಮಾಡಿದ್ದಾನೆ.


ಒಂದು ವಾಕ್ಯದ ಪ್ರೋಂಪ್ತ್ ಬರೆದು ಇಡಿಯ ವಿಡಿಯೋ ಮತ್ತು ಹಾಡುಗಳನ್ನು ತಯಾರಿಸುವುದು ಪೂರ್ಣವಾಗಿ ಕಲ್ಪಿತ. ಹಾಗಾಗಿ ಇದನ್ನು ನೋಡಿ ಯಾರಾದರೂ "ಎಂಚಿನ! ಕನ್ನಡ ಮೀಡಿಯಂ ಕಾಸರಗೋಡಾ! ಅವು ಮಾಂತ ಎಐಡ್ ಮಲ್ಪುನಿಯೇ; ಅವ್ವೆನ್ ಏರ್ಲಾ ಮಲ್ಪೋಲಿ" ಅಥವಾ "ಯಾವದು!  ಕನ್ನಡ ಮೀಡಿಯಂ ಕಾಸರಗೋಡಾ! ಅದೆಲ್ಲ ಎಐಲಿ ಮಾಡುವದೂಳಿ; ಅದರ ಆರೂ ಮಾಡುಗು" ಎಂದು ತಿಳಿದುಕೊಳ್ಳುವುದಿದ್ದರೆ ದಯವಿಟ್ಟು ಇದನ್ನು ಓದಬೇಕೆಂದು ಕೇಳಿಕೊಳ್ಳುತ್ತೇನೆ.


ಇದು ಕಾಸರಗೋಡಿನ ಕನ್ನಡ

ಚಾನೆಲಿನ ಹೆಸರು ಕನ್ನಡ ಮೀಡಿಯಂ ಕಾಸರಗೋಡು ಯೂಟ್ಯೂಬ್ ಚಾನೆಲ್ . ಕಾಸರಗೋಡು ಕನ್ನಡಿಗರ ಕನ್ನಡ ಭಾಷೆಯ ಅಭಿವ್ಯಕ್ತಿಗೆಂದೇ ಮಾಡಿರುವ ಚಾನೆಲ್ ಕನ್ನಡ ಮೀಡಿಯಂ ಕಾಸರಗೋಡು ಯೂಟ್ಯೂಬ್ ಚಾನೆಲ್. ಇಲ್ಲಿ ಇಂಡಿಕ್ ಪರಂಪರೆಯ ಜೀವನ ವಿಧಾನಗಳನ್ನು ಹೇಳಲಾಗುತ್ತದೆ, ಕನ್ನಡ ಭಾಷೆಯ ಅಭಿವ್ಯಕ್ತಿ ಕಾಸರಗೋಡಿನಲ್ಲಿ ಯಾವ ಬಗೆಯಲ್ಲಿ ಆಗುತ್ತಿದೆ ಎಂಬುದರ ಉದಾಹರಣೆಯಾಗಿಯೂ ಕನ್ನಡ ಮೀಡಿಯಂ ಕಾಸರಗೋಡು ಯೂಟ್ಯೂಬ್ ಚಾನೆಲಿನಲ್ಲಿ ನೋಡಬಹುದು.


ಇದು ಇಂಡಿಕ್ ಜೀವನವಿಧಾನದ ಒಳಗುಟ್ಟು. ಇದು ಕಾಸರಗೋಡಿನ ಕನ್ನಡ. ಇದು ಕಾಸರಗೋಡಿನ ಕನ್ನಡ. 🎶@Kannada Medium Kasaragod





Saturday, May 9, 2026

ಕಗ್ಗಮಾಲಿಕೆ - ೬: ಧರ್ಮಜಿಜ್ಞಾಸೆ

 

ಕಗ್ಗಮಾಲಿಕೆ - ೬: ಧರ್ಮಜಿಜ್ಞಾಸೆ

ಪೀಠಿಕೆ:

ಕಾಣದ ವಸ್ತುಗಳೆಡೆಗಿನ ಭಯವೇ ಮನುಷ್ಯನಲ್ಲಿ ಭಕ್ತಿಯನ್ನುಂಟುಮಾಡುತ್ತದೆಯೇ ಎಂಬುದು ಮೂಲ ಜಿಜ್ಞಾಸೆ. ಅದು ಬರಿಯ ಭಯವಾಗಿದ್ದರೆ ಆ ದೇವತೆಗಳ ಪರಾಕ್ರಮಕ್ಕೆ ಸದಾ ಕಾಲ ಹೆದರುತ್ತಿರಬೇಕು. ಇದು ಜ್ಞಾನದ ದಾರಿಯಲ್ಲ. ಅದು ಬರಿಯ ಭಯವಾಗಿದ್ದರೆ ಅಲ್ಲಿ ಮನುಷ್ಯರ ಮತ್ತು ದೇವತೆಗಳ ನಡುವೆ ಪರಸ್ಪರ ಸ್ಪರ್ಧೆ ಏರ್ಪಟ್ಟು ಅಶಾಂತಿ ನೆಲೆಸೀತು. ಅಲ್ಲಿ ಧರ್ಮಕ್ಕೆ ಸ್ಥಾನವಿಲ್ಲ. ಇದು ಅಪೇಕ್ಷಣೀಯವಲ್ಲದ ಕಾರಣ ಧರ್ಮದ ನೆಲೆಯನ್ನು ಚಿಂತಿಸಿ ಕಂಡುಕೊಳ್ಳಬೇಕಾಗುತ್ತದೆ.

ಕಗ್ಗ:

ನರರ ಭಯಬಯಕೆಗಳೆ ಸುರರ ತಾಯ್ತಂದೆಗಳೊ?|
ಸುರರಟ್ಟಹಾಸದಿನೆ ನರಭಕ್ತಿಯೊರಲೋ?||
ಪರಕಿಸುವರೇನವರ್ಗಳನ್ಯೋನ್ಯ ಶಕ್ತಿಗಳ|
ಧರುಮವೆಲ್ಲಿದರಲ್ಲಿ? ಮಂಕುತಿಮ್ಮ||



ವ್ಯಾಖ್ಯಾನ:

ದೇವತೆಗಳು ಮನುಷ್ಯರ ಕಲ್ಪನೆಯೋ  ಅಥವಾ ಆ ದೇವತೆಗಳ ಬಲವೇ ನಮ್ಮ ಭಕ್ತಿಗೆ ಮೂಲವಾಯಿತೋ ಎಂಬ ಗೊಂದಲ ಸಾಮಾನ್ಯ ಮನುಷ್ಯನದ್ದು. ಮನುಷ್ಯರು ಮತ್ತು ದೇವತೆಗಳ ಪರಸ್ಪರ ಪರೀಕ್ಷಿಸುತ್ತಿದ್ದಾರೆ ಎಂದು ತಪ್ಪಾಗಿ ತಿಳಿದುಕೊಂಡರೆ ಧರ್ಮದ ನೆಲೆ ಎಲ್ಲಿದೆಯೆಂದು ತಿಳಿಯುವುದು ಸಾಧ್ಯವಾಗದು.


ತಾತ್ಪರ್ಯ:

ಇದು ನಾಸ್ತಿಕತೆಯಲ್ಲ;  ಕಣ್ಣುಮುಚ್ಚಿ ಬೇಡಿಕೊಳ್ಳುವ ಭಕ್ತಿಯ ಪರಾಕಾಷ್ಠೆಯೂ ಇದಲ್ಲ. ಜಿಜ್ಞಾಸೆಯಿಂದ ತೊಡಗಿ ಅಂತಿಮ ಸತ್ಯದ ಆರಯ್ವಿಕೆಯತ್ತ ಒಯ್ಯುವ ಚಿಂತನೆಯ ಸೆಲೆಯಿದು. 

ಉಪಸಂಹಾರ:

ಸಗ್ಗ ಸುಖಕ್ಕೆ ದಾರಿ ತಿಳಿದವರಿಲ್ಲ. ಆದರೆ ಇದು ಕಗ್ಗ ಸುಖದ ಸೆಲೆ; ಇಲ್ಲಿ ಕಗ್ಗದ ಸಾರ ಸೋರದಂತಹ ರಾಗಬದ್ಧವಾದ ಅನುರಣನಗಳಿವೆ — ಇದನ್ನು ಯಥೇಚ್ಛವಾಗಿ ಆಸ್ವಾದಿಸಬಹುದು. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗ ಸುಖ ದೊರಕುವಂತಾಗಲಿ. ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧವಾದ ಈ ಆಡಿಯೋ ವಿಡಿಯೋ ನಿಮ್ಮ ಮೈಮನಗಳನ್ನು ಸೂರೆಗೊಳ್ಳಬಲ್ಲುದೆಂಬ ನಿರೀಕ್ಷೆಯೊಂದಿಗೆ ಇಲ್ಲಿರುವಾತ.

#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻

Friday, May 8, 2026

ಸುಡಾಪಿ ಕವಿತೆ

 ಸುಡಾಪಿ ಕವಿತೆ



ಇದೊಂದು ವಿಶಿಷ್ಟ ಮನೋಭಾವದ ಕುರಿತಾದ ಕವಿತೆ. ಸುಡಾಪಿ ಎಂದರೆ ಒಂದು ಮನಸ್ಥಿತಿಯೆಂದು ಬಲ್ಲವರು ಹೇಳಿದ್ದಾರೆ. "ನಮ್ಮ ಮತವೊಂದೇ ಮುಖ್ಯ — ನಮ್ಮ ಪ್ರವಾದಿಯೇ ಅಂತಿಮರು, ನಮ್ಮ ಪುಸ್ತಕದಿಂದ ಮಾತ್ರ ಉದ್ಧಾರ, ನಮ್ಮ ಮತವನ್ನು ಅನುಸರಿಸುವುದರಿಂದ ಮಾತ್ರ ಸ್ವರ್ಗದ ಬಾಗಿಲು ತೆರೆಯುವುದು" ಎಂದು ಎಲ್ಲಾ ಮತಸ್ಥರು ನಂಬುತ್ತಾರೆ. ಇದರಲ್ಲಿ ವಿಶೇಷವಿಲ್ಲ; ಆದರೆ ದೇಶದ ಸುರಕ್ಷತೆಗಿಂತ ದೀನ್ ಮುಖ್ಯ ಎನ್ನುವ ಮನಸ್ಥಿತಿ ಕಳವಳಕಾರಿ. ಈ ಕವಿತೆ ಅಂತಹ ಮನಸ್ಥಿತಿಯನ್ನು ವಿಶ್ಲೇಷಿಸುತ್ತದೆ. 

ಇದೊಂದು ಮತಕೇಂದ್ರಿತ ರಾಜಕೀಯ ಮನೋಭಾವ, ಉಮ್ಮಾ-ಆಧಾರಿತ ಗುರುತು ಮತ್ತು “ನಾನು ಜಿಹಾದಿ ಅಲ್ಲ” ಎಂಬ ನಕಾರಾತ್ಮಕ ಆತ್ಮರಕ್ಷಣೆಯ ವ್ಯಂಗ್ಯರೂಪ. ಇದನ್ನು ಕವಿತೆ ಪ್ರಶ್ನಿಸುವ ಬಗೆ ಇಂತಿದೆ:— "ನೀನು ಜಿಹಾದಿ ಅಲ್ಲವೆಂದರೂ, ಜಿಹಾದೀ ಮನೋವೃತ್ತಿಗೆ ನೆಲೆಯಾದ ಮೌಲ್ಯಗಳನ್ನು ಬೆಂಬಲಿಸುತ್ತೀಯಾ?". ಇದಕ್ಕೆ ದೊರಕಬಲ್ಲ ಉತ್ತರಗಳಲ್ಲಿ ನಾಗರಿಕ ಪ್ರಜ್ಞೆ ಉಳಿದುಕೊಳ್ಳುತ್ತದೆ.

ಆಗ ಅಲ್ಲೊಂದು ತತ್ತ್ವಸಂಘರ್ಷ ಏರ್ಪಡುತ್ತದೆ. ಅದೇನೆಂದರೆ "ಅನ್ಯ ದೇಶದಲ್ಲಿ ನೆಲೆಸಿರುವ ಹಿಂದು ನನಗೆ ಯಾರೂ ಅಲ್ಲ" ಎನ್ನಲಾಗುತ್ತದೆ. ಆದರೆ ಅದೇ ಉಸಿರಿನಲ್ಲಿ ಅಲ್ಲಿರುವ "ಮೊಯ್ಮೀನ್ ನನಗೆ ಬಂಧು" ಎನ್ನಲಾಗುತ್ತದೆ. ಇದು ಸಾಧಾರಣ ನೆಲೆಗಟ್ಟಿನ ನಾಗರಿಕ ಪ್ರಜ್ಞೆಯನ್ನು ಮೀರಿದ ನಿಲುವು. ಕಾಶ್ಮೀರ ನಮ್ಮದಲ್ಲ ಎಂದು ನಂಬುವುದು ಕೂಡ ಇದೇ ಸಾಲಿಗೆ ಸೇರುತ್ತದೆ. ಇಲ್ಲಿ ಕವಿತೆ ಬರಿಯ ವಿಡಂಬನೆಯ ಮೂಲಕ ಇದನ್ನು ತೋರಿಸಿಕೊಟ್ಟಿದೆಯಾದರೂ ಯಾರನ್ನೂ ಪ್ರಶ್ನಿಸುತ್ತಿಲ್ಲ.   

"ಬಾಮೀಯಾನದ ಬುದ್ಧನನ್ನು ಅವರು ಬೇಕಾದರೆ ಒಡೆಯುತ್ತಾರೆ — ಅದು ಅವರ ದೇಶ; ಅವರದೇ ಸಾಮ್ರಾಜ್ಯ. ಅವರ ಒಡೆತನದಲ್ಲಿರುವ ದೇಶದಲ್ಲಿ ಅವರು ಏನಾದರೂ ಮಾಡಿಕೊಳ್ಳುತ್ತಾರೆ. ಅದನ್ನು ಪ್ರಶ್ನಿಸುವ ಅಧಿಕಾರ ನಮಗಿಲ್ಲ" ಎನ್ನಲಾಗುತ್ತದೆ. ಆದರೆ ಬುದ್ಧ ಇಂಡಿಕ್ ಸಂಸ್ಕೃತಿಯ ಪ್ರಧಾನ ಭಾಗವೆಂಬುದನ್ನು ಮರೆಯಲಾಗುತ್ತದೆ. 

ಇಂಡ್ಯಾ ಜಾತ್ಯಾತೀತ — ಪರಿಸ್ಥಿತಿಯ ವ್ಯಂಗ್ಯದಿಂದ ರೂಪುಗೊಂಡ ಮರುವ್ಯಂಗ್ಯವಿದು. “ನಾಗರಿಕ ಹಕ್ಕು ಅಥವಾ ಪ್ರಜೆಯಾಗಿ ನನ್ನ ಹಕ್ಕು ಜಾತ್ಯಾತೀತವಾಗಿರಲಿ ಸೊತ್ತಿನ ಹಕ್ಕು ದೀನೀ ಆಗಲಿ” — ಎಂದರೆ "ನನಗೆ ಸಾಂದರ್ಭಿಕ ಜಾತ್ಯಾತೀತತೆ ಸಾಕು. ನಾಗರಿಕ ದಂಡ ಸಂಹಿತೆ ನನಗೆ ಶರೀಯತ್ ರೂಪದಲ್ಲಿ ಬೇಡ, ಆದರೆ ವೈಯಕ್ತಿಕ ಕಾನೂನು (ತಾಯಿತಂದೆಯರ ಆಸ್ತಿ ಅವರ ಮಕ್ಕಳಿಗೆ ದೊರಕುವ ವಿಚಾರವನ್ನು ಚರ್ಚಿಸುವ) ಶರೀಯತ್ ಆಗಿ ದೊರಕಲಿ." ಇಸ್ಲಾಮಿಸ್ಟ್ ರಾಜಕೀಯ ಧ್ವನಿಯನ್ನು ಪ್ರಶ್ನಿಸುವಾಗಲೂ ಇಸ್ಲಾಂ ಮತದ ಬಗೆಗಿನ ವಿಮರ್ಶೆಯೋ ಚರ್ಚೆಯೋ ಇಲ್ಲಿಲ್ಲ. ಇದೇ ಲೇಖಕನ "ಸೂಫಿ" ಕವಿತೆಯಲ್ಲಿಯೂ ಸಹ ಇದೇ ಶೈಲಿಯನ್ನು ಅಳವಡಿಸಲಾಗಿದೆ. ಸೂಫಿ ಬಾಹ್ಯ ಆಚರಣೆಗಳಲ್ಲಿರುವ ದ್ವಂದ್ವವನ್ನು ಎತ್ತಿ ತೋರಿಸುವಾಗಲೂ ಮತದ ವಿಮರ್ಶೆ ಅಲ್ಲಿಲ್ಲ ಎಂದು ಮನಗಾಣಬಹುದು. ಮತದ ಅನುಷ್ಠಾನದಿಂದ ದೊರಕಬಲ್ಲ ಮೌಲ್ಯ ನಿತ್ಯಾ ಮಾಡುವ ಸುಜೂದುಗಳಿಂದಲಾಗಿ ದೊರಕಿದೆಯೋ ಎಂದು ಸೂಫಿಯೊಬ್ಬನು ಪ್ರಶ್ನಿಸುವ ಶೈಲಿ ಅಲ್ಲಿನದಾಗಿತ್ತು.

"ಬೋಳ" ಎಂಬ ಪದ ಪ್ರಾದೇಶಿಕ ಸೊಗಡಿನ ಪ್ರಯೋಗವಾಗಿದ್ದು ವಿಡಂಬನೆಗಾಗಿ ಬಳಸಲಾಗಿದೆ. 
____________________________________________________________________________
ಕೇವಲ ಒಬ್ಬ ಸುಡಾಪೀ ನಾನು | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ಬೋಳ
ಸುಡಾಪಿ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ಬೋಳ
ಸುಡಾಪಿ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ ||

ಸುಡಾಪಿಯಾಗಿರುವೆ ಜಿಹಾದೀ ಅಲ್ಲ ನಾ
ಸುಡಾಪಿಯಾಗಿರುವೆ ಜಿಹಾದೀ ಅಲ್ಲ ನಾ | ಬೋಳ
ಸುಡಾಪೀ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ ||

ಪಾಕಿಸ್ಥಾನದ ಹಿಂದು, ನನ್ನ ಯಾರೂ ಅಲ್ಲವೊ ಜಂತು !
ಆದರೆ ಅಲ್ಲಿರುವಂಥ ಮೊಯ್ಮೀನ್ ನನಗೆ ಬಂಧು |
ಮೊಯ್ಮೀನ್ ನನಗೆ ಬಂಧು | ಬೋಳ
ಸುಡಾಪಿ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ ||

ಕಾಶಮೀರದ ಹಿಂದು, ನನ್ನ ಯಾರೂ ಅಲ್ಲವೊ ಜಂತು !
ಆದರೆ ಅಲ್ಲಿರುವಂಥ ಮೊಯ್ಮೀನ್ ನನಗೆ ಬಂಧು |
ಮೊಯ್ಮೀನ್ ನನಗೆ ಬಂಧು | ಬೋಳ
ಸುಡಾಪಿ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ ||

ಬಾಮೀಯಾನದ ಬುದ್ಧನ ನಾವು ಹೊಡೆದು ಒಡೆಯುವುದಂತೂ ಸತ್ಯಾ |
ನಮ್ಮ ಸಾಮ್ರಾಜ್ಯ ನಮ್ಮ ಹುಕೂಮತ್ ನಮ್ಮೆಣಿಕೇ ಎಂದಿಗು ಸತ್ಯಾ |
ದೀನಿ ಗುಲಾಮ ಸುಡಾಪೀ ನಾನು ಜಿಹಾದಿಯೆಂದೇತಕೆ ಕರೆದೀರೀ | ಬೋಳ
ಸುಡಾಪಿ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ ||

ಇದು ಜಾತ್ಯಾ-ತೀತಾ ಇಂಡ್ಯಾ | ಭಾರತವೆಂಬ ಹೆಸರನ್ನೇ  ಕೇಳಿದರಾಗದು, ಸತ್ಯಾ |
ಪ್ರಜೆಗಳ ಹಕ್ಕು ಜಾತ್ಯಾ-ತೀತಾ ಇರಲಿ ಸೊತ್ತಿನ ಹಕ್ಕು ದೀನೀ ಆಗಲಿ, ಸತ್ಯಾ |
ದೀನಿ ಗುಲಾಮ ಸುಡಾಪೀ ನಾನು ಜಿಹಾದಿಯೆಂದೇತಕೆ ಕರೆದೀರೀ | ಬೋಳ
ಸುಡಾಪಿ ಆಗಿರುವಂಥ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ | ನನ್ನನು
ಜಿಹಾದಿಯೆಂದೇತಕೆ ಕರೆದೀರೀ ||

Tuesday, April 28, 2026

ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ

 ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ


ಪೀಠಿಕೆ:

ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳು ಸವೆದುಹೋದಾಗ ಮತ್ತು ಹೊಸ ಮೌಲ್ಯಗಳು ಇನ್ನೂ ರೂಪಗೊಳ್ಳದಿದ್ದಾಗ ಸಮಾಜವು ಒಂದು ರೀತಿಯ ಅಸ್ಥಿರತೆಗೆ ಒಳಗಾಗುತ್ತದೆ. ಡಿ.ವಿ.ಜಿ ಅವರು ಈ ಸ್ಥಿತಿಯನ್ನು 'ಪ್ರೇತ'ದ ರೂಪಕದ ಮೂಲಕ ಈ ಪದ್ಯದಲ್ಲಿ ಚಿತ್ರಿಸಿದ್ದಾರೆ.


ಕಗ್ಗ:

ಇಳೆಯ ಬಿಟ್ಟಿನ್ನುಮೆತ್ತಲುಮೈದದ ಪ್ರೇತ|
ವಲೆವಂತೆ ಲೋಕ ತಲ್ಲಣಿಸುತಿಹುದಿಂದು||
ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ|
ತಳಮಳಕೆ ಕಡೆಯೆಂದೊ?-ಮಂಕುತಿಮ್ಮ||



ವ್ಯಾಖ್ಯಾನ:

ಪ್ರೇತಾವಸ್ಥೆಯೆಂದರೆ ಮರಣದ ನಂತರ ಪ್ರಯಾಣದಲ್ಲಿರುವ ಆತ್ಮದ ಸ್ಥಿತಿ. ಈ ಭೂಮಿಯನ್ನು ಬಿಟ್ಟು ಎಲ್ಲಿಗೂ ಹೋಗದ ಪ್ರೇತದಂತೆ ಲೋಕ ತಲ್ಲಣಿಸುತ್ತಲಿದೆ. ಹಳೆಯ ಧರ್ಮ ಸತ್ತುಹೋಗಿದೆ; ಹೊಸದಾದ ಧರ್ಮವಿನ್ನೂ ಹುಟ್ಟಲಿಲ್ಲ. ಈ ತಳಮಳಕ್ಕೆ ಕೊನೆಯೆಂದು ಎಂಬುದು ತಿಳಿಯದಾಗಿದೆ ಎಂದಿದ್ದಾರೆ.


ದೇಹವನ್ನು ಬಿಟ್ಟ ಆತ್ಮಕ್ಕೆ ಪರಲೋಕದ ದಾರಿ ಸಿಗದಿದ್ದಾಗ ಅದು ಹೇಗೆ ಭೂಮಿಯ ಮೇಲೆಯೇ ಅಲೆಯುತ್ತದೆಯೋ, ಹಾಗೆಯೇ ಇಂದಿನ ಲೋಕವು ದಿಕ್ಕು ಕಾಣದೆ ತಲ್ಲಣಿಸುತ್ತಿದೆ. ನಾವು ಹಳೆಯ ಸಂಪ್ರದಾಯಗಳನ್ನು 'ಮೌಢ್ಯ'ವೆಂದು ಬಿಡುತ್ತಿದ್ದೇವೆ, ಆದರೆ ಆಧುನಿಕತೆಯ ಹೆಸರಿನಲ್ಲಿ ನಮಗೆ ಸಿಗುತ್ತಿರುವ ಭೌತಿಕ ಸುಖಗಳು ಅಂತರಂಗದ ಶಾಂತಿಯನ್ನು ನೀಡುತ್ತಿಲ್ಲ.


"ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ" ಎಂಬ ಸಾಲು ಅತ್ಯಂತ ಪ್ರಸ್ತುತ. ವಿಜ್ಞಾನವು ಹಳೆಯ ನಂಬಿಕೆಗಳನ್ನು ಪ್ರಶ್ನಿಸಿ ಸಾಯಿಸಿದೆ. ಆದರೆ ವಿಜ್ಞಾನ ಅಥವಾ ತರ್ಕವು ಮನುಷ್ಯನಿಗೆ ಬದುಕಿನ ಉದ್ದೇಶವನ್ನಾಗಲೀ ಅಥವಾ ನೈತಿಕ ಸ್ಥೈರ್ಯವನ್ನಾಗಲೀ ಇನ್ನೂ ನೀಡಲು ಸಾಧ್ಯವಾಗಿಲ್ಲ. ಈ ಎರಡರ ನಡುವಿನ 'ಶೂನ್ಯ'ವೇ ಇಂದಿನ ಲೋಕದ ತಳಮಳಕ್ಕೆ ಕಾರಣ.


ಇದು ಕೇವಲ ಧಾರ್ಮಿಕ ಬದುಕಿನ ಕುರಿತ ಮೌಖಿಕ ಉಪದೇಶವಲ್ಲ; ಬದುಕುವುದನ್ನು ಕ್ರಮಗೊಳಿಸಬೇಕಾದ ವಿಧಾನವೂ ಇಲ್ಲಿ ಪರಾಮರ್ಶಿಸಲ್ಪಟ್ಟಿದೆ. ಹಳೆಯ ತಲೆಮಾರಿನ ಸಂಯಮ ಮತ್ತು ಹೊಸ ತಲೆಮಾರಿನ ಆವೇಗಗಳೆರಡರ ನಡುವಣ ಸೆಣಸಾಟದಲ್ಲಿ ಸಿಲುಕಿದ ಸಮಾಜದ 'ಪ್ರೇತಾವಸ್ಥೆ'ಯನ್ನು ಡಿ.ವಿ.ಜಿ ಇಲ್ಲಿ ಪ್ರಶ್ನಿಸುತ್ತಿದ್ದಾರೆ.


ತಾತ್ಪರ್ಯ:

ಈ ಅತಂತ್ರ ಸ್ಥಿತಿ ಅಥವಾ ತಳಮಳಕ್ಕೆ ಕೊನೆಯೆಂದು? ಎಂಬ ಕವಿಯ ಪ್ರಶ್ನೆಯು ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುತ್ತದೆ. ನಾವು ಯಾವುದನ್ನು 'ಧರ್ಮ'ವೆಂದು ಸ್ವೀಕರಿಸಬೇಕು ಮತ್ತು ಈ ಗೊಂದಲದಿಂದ ಹೊರಬರುವುದು ಹೇಗೆ ಎಂಬುದು ಈ ಪದ್ಯದ ಅಂತರಾರ್ಥ.


ಉಪಸಂಹಾರ:

ಸಗ್ಗ ಸುಖಕ್ಕಾಗಿ ಹಾತೊರೆಯುವುದು ಜೀವನ ಎಂಬ ಭ್ರಮೆ ಲೋಕದಲ್ಲಿದೆ. ಆದರೆ ಇಲ್ಲಿರುವುದು ಕಗ್ಗ ಸುಖದ ರಸಾಸ್ವಾದನೆಗೊಂದು ಅಪರೂಪದ ಅವಕಾಶ. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗ ಸುಖ ದೊರಕುವಂತಾಗಲಿ. ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧವಾದ ಈ ಆಡಿಯೋ ವಿಡಿಯೋ ನಿಮ್ಮ ಮೈಮನಗಳನ್ನು ಸೂರೆಗೊಳ್ಳಬಲ್ಲುದೆಂಬ ನಿರೀಕ್ಷೆಯೊಂದಿಗೆ ಇಲ್ಲಿರುವಾತ.



#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻




ಕೃಷ್ಣಪ್ರಕಾಶ ಬೊಳುಂಬು

Saturday, April 25, 2026

ಕಗ್ಗಮಾಲಿಕೆ – ೪: ನಿರ್ವಚನಾತೀತ

 ಕಗ್ಗಮಾಲಿಕೆ – ೪: ನಿರ್ವಚನಾತೀತ


ಕಗ್ಗ:


ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ|

ಮಹಿಮೆಯಿಂ ಜಗವಾಗಿ ಜೀವವೇಷದಲಿ||

ವಿಹಿಪುದದೊಳ್ಳಿತೆಂಬುದು ನಿಸದವಾದೊಡಾ|

ಗಹನ ತತ್ತ್ವಕ್ಕೆ ಶರಣೊ-ಮಂಕುತಿಮ್ಮ|| 


ವ್ಯಾಖ್ಯಾನ:

ಇದೆಯೋ ಇಲ್ಲವೋ ಎಂದು ತಿಳಿಯಲಾಗದ ವಸ್ತುವೊಂದು ಲೋಕದಲ್ಲಿ ಒಳ್ಳೆಯದನ್ನು ಮಾಡುತ್ತದೆಂದು ನಿನಗೆ ನಿಶ್ಚಯವಾದರೆ ಆ ಗಹನ ತತ್ತ್ವಕ್ಕೆ ಶರಣಾಗು.


ತಾತ್ಪರ್ಯ:

ಎಲ್ಲವನ್ನೂ ಒಳಗೊಂಡ ಎಲ್ಲದರ ಹಿಡಿವಡೆದ ಎಲ್ಲದಕ್ಕೂ ಮಿಗಿಲಾದ ಚೈತನ್ಯವೊಂದಿದೆ. ಅದು ಗಹನವಾದ ತತ್ತ್ವ; ಅದು ವಿವರಣೆಗೆ ನಿಲುಕದಂತಹುದು. ಅದು ನಿನಗೆ ಒಳಿತನ್ನು ಮಾಡುವುದೆಂದು ನಿಶ್ಚಯವಾದರೆ ಚಿಂತನೆಗೆ ನಿಲುಕದ ಆ ಪರಮತ್ತ್ವಕ್ಕೆ ಶರಣಾಗು. ಇದು ಈ ಕಗ್ಗದ ತಾತ್ಪರ್ಯ.


ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗದ ಭಾವ ಗ್ರಾಹ್ಯವಾಗಬಲ್ಲುದು. ಅನುರಣನಗಳಲ್ಲಿ ಕಗ್ಗದ ಕಂಪು ಮೈದೋರುವಂತಾಗಲಿ.


#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻




ಕೃಷ್ಣಪ್ರಕಾಶ ಬೊಳುಂಬು

Thursday, April 16, 2026

ಕಗ್ಗಮಾಲಿಕೆ – ೩: ಅವ್ಯಕ್ತ

 

ಕಗ್ಗಮಾಲಿಕೆ – ೩: ಅವ್ಯಕ್ತ 



ಕಗ್ಗ:

ಜೀವ ಜಡರೂಪ ಪ್ರಪಂಚವನದಾವುದೋ| 

ಆವರಿಸಿಕೊಂಡುಮೊಳನೆರೆದುಮಿಹುದಂತೆ|| 

ಭಾವಕೊಳಪಡದಂತೆ ಅಳತೆಗಳವಡದಂತೆ| 

ಆ ವಿಶೇಷಕೆ ಮಣಿಯೊ-ಮಂಕುತಿಮ್ಮ||


ಪದವಿಂಗಡಣೆ:

ಪ್ರಪಂಚವಂ ಅದಾವುದೋ

ಆವರಿಸಿಕೊಂಡುಂ ಒಳನೆರೆದುಂ ಇದೆಯಂತೆ =  ಆವರಿಸಿಕೊಂಡು ಅದರೊಳಗೆ ತಾನು ತುಂಬಿಕೊಂಡೂ ಇದೆಯಂತೆ


ವ್ಯಾಖ್ಯಾನ:

ಚೇತನವೂ ಅಚೇತನವೂ ಆಗಿರುವ ಪ್ರಪಂಚವನ್ನು ಅವ್ಯಕ್ತದೊಂದು ವಿಶೇಷವು ಆವರಿಸಿಕೊಂಡು ಅದರೊಳಗೆ ತಾನು ತುಂಬಿಕೊಂಡೂ ಇದೆಯಂತೆ. ಅದು ಭಾವಕ್ಕೂ ಒಳಪಡದಂತೆ ಮತ್ತು ಅಳತೆಗೂ ನಿಲುಕದಂತೆ. ಆ ಚೈತನ್ಯವಿಶೇಷಕ್ಕೆ ತಲೆಬಾಗು ಎಂದಿದ್ದಾರೆ.


ತಾತ್ಪರ್ಯ:

ಅವ್ಯಕ್ತವಾದುದನ್ನು ಅರಿತು ತಲೆಬಾಗಬೇಕೆಂಬುದು ಈ ಕಗ್ಗದ ತಾತ್ಪರ್ಯ.


ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ನಿಧಾನಗತಿಯ ರಾಗಾನುರಣನಗಳಲ್ಲಿ ಕಗ್ಗದ ಭಾವ ಗ್ರಾಹ್ಯವಾಗಬಲ್ಲುದು. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ.

#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻


ಕೃಷ್ಣಪ್ರಕಾಶ ಬೊಳುಂಬು

Friday, April 10, 2026

ಕಗ್ಗಮಾಲಿಕೆ - ೨: ನಂಬುಗೆ

 ಕಗ್ಗಮಾಲಿಕೆ - ೨: ನಂಬುಗೆ


ಕಗ್ಗ:

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲ |
ದೇವ ಸರ್ವೇಶ ಪರಬೊಮ್ಮನೆಂದು ಜನಂ ||
ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ |
ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ ||


ವ್ಯಾಖ್ಯಾನ:

ಲೋಕದ ಹುಟ್ಟಿಗೆ ಕಾರಣಕರ್ತನೆಂದೂ, ಲೋಕದ ಮಾಯೆಯನ್ನು ಆಗಗೊಡುವವನೆಂದೂ, ದೇವರ ದೇವ ಪರಬ್ರಹ್ಮನೆಂದೂ, ಲಕ್ಷ್ಮೀ ಸಮೇತನಾದ ಮಹಾವಿಷ್ಣುವೆಂದೂ ಯಾವುದನ್ನು ತಾವು ಕಾಣದಿದ್ದರೂ ಜನರು ಶ್ರದ್ಧೆಯಿಂದ ನಂಬಿದ್ದಾರೋ ಆ ಪರಮಾದ್ಭುತ ಚೈತನ್ಯಕ್ಕೆ ಮೊದಲು ತಲೆಬಾಗು.


ತಾತ್ಪರ್ಯ:

ಲೋಕವನ್ನು ಸೃಷ್ಟಿಸಿದ ಚೈತನ್ಯವನ್ನು ಮೊದಲಿಗೆ ನಂಬಬೇಕು, ನಂಬಿ ತಲೆಬಾಗಬೇಕು ಎಂದು ಗುಂಡಪ್ಪನವರು ಈ ಕಗ್ಗದ ಮೂಲಕ ಸಾರಿದ್ದಾರೆ.


ಇದು ಹಳೆಯ ಮೂಸೆಯಲ್ಲಿ ಎರೆದ ಹೊಸ ಎರಕ. ನಿಧಾನಗತಿಯ ಅನುರಣನಗಳಲ್ಲಿ ಕಗ್ಗದ ಭಾವ ಗ್ರಾಹ್ಯವಾಗಬಲ್ಲುದು. ಮಂತ್ರಪ್ರಾಯವಾದ ಸಾಲುಗಳಿಗಾಗಿ ಸಿದ್ಧಪಡಿಸಿದ ರಾಗಬದ್ಧ ಆಡಿಯೋ ವಿಡಿಯೋ ಇಲ್ಲಿದೆ.

#intellectualsupremacy #DVG #wisdom #philosophy #indicthought #IndicCivilization #bolumbu #kagga #mankutimmanakagga #dvgundappa #dvgundappa✍🏻


ಕೃಷ್ಣಪ್ರಕಾಶ ಬೊಳುಂಬು

ಬೋಟ್ಸಪ್ ಪ್ರೊಫೆಸರ್

ಬೋಟ್ಸಪ್ ಪ್ರೊಫೆಸರ್   ಶಾಸ್ತ್ರ ಪುರಾಣವ ಕಲಿಯಲು ಹೊರಟೆ ಪದಪಾಠಕು ಮುನ್ನವೆ ಬೇಸತ್ತು ಹೋದೆ   ಅರಿವುದ ಮುನ್ನವೆ ಮರೆಯಿತು ಬೇಗ ಕಲಿವುದ ನಿಲ್ಲಿಸಿ ದು...