Sunday, November 16, 2025

ದಕ್ಷಿಣಾಮೂರ್ತಿಯ ಮೌನವ್ಯಾಖ್ಯಾನ ಏಕಾಣ್ಮ ಪಂಚಕದಲ್ಲಿ ಪ್ರಕಟಗೊಂಡ ಬಗೆ

ದಕ್ಷಿಣಾಮೂರ್ತಿಯ ಮೌನವ್ಯಾಖ್ಯಾನ ಏಕಾಣ್ಮ ಪಂಚಕದಲ್ಲಿ ಪ್ರಕಟಗೊಂಡ ಬಗೆ

ಏಕಾಣ್ಮ ಪಂಚಕದ ಅಂತಿಮ ಚರಣ ಮೌನವ್ಯಾಖ್ಯಾನವನ್ನು ವಿಸ್ತರಿಸುತ್ತದೆ. ಮೌನೋಪದೇಶದಿಂದಲೇ ಪರಬ್ರಹ್ಮತತ್ತ್ವವನ್ನು ಪ್ರಕಟಿಸುವಂತಹವನಾದ ಆ ದಕ್ಷಿಣಾಮೂರ್ತಿಯನ್ನು ನಾನು ಸ್ತುತಿಸುತ್ತೇನೆ - ಎನ್ನುವ ದಕ್ಷಿಣಾಮೂರ್ತಿ ಸ್ತೋತ್ರದ ಧ್ಯಾನ ಶ್ಲೋಕದಲ್ಲಿಯೂ ಪ್ರಕಟವಾದುದು ಇದೇ ಭಾವ. 


ದಕ್ಷಿಣಾಮೂರ್ತಿ ಸ್ತೋತ್ರದ ಧ್ಯಾನ ಶ್ಲೋಕ

(ಆದಿಶಂಕರ ಭಗವತ್ಪಾದರ ರಚನೆ)




ಮೂಲ:

मौनव्याख्या प्रकटित परब्रह्मतत्त्वं युवानं

वर्षिष्ठांते वसद् ऋषिगणैः आवृतं ब्रह्मनिष्ठैः ।

आचार्येन्द्रं करकलित चिन्मुद्रमानंदमूर्तिं

स्वात्मारामं मुदितवदनं दक्षिणामूर्तिमीडे ॥१॥


ಲಿಪ್ಯಂತರಣ:

ಮೌನವ್ಯಾಖ್ಯಾ ಪ್ರಕಟಿತ ಪರಬ್ರಹ್ಮತತ್ತ್ವಂ ಯುವಾನಂ

ವರ್ಷಿಷ್ಠಾಂತೇ ವಸದ್ ಋಷಿಗಣೈಃ ಆವೃತಂ ಬ್ರಹ್ಮನಿಷ್ಠೈಃ |

ಆಚಾರ್ಯೇನ್ದ್ರಂ ಕರಕಲಿತ ಚಿನ್ಮುದ್ರಮಾನಂದಮೂರ್ತಿಂ

ಸ್ವಾತ್ಮಾರಾಮಂ ಮುದಿತವದನಂ ದಕ್ಷಿಣಾಮೂರ್ತಿಮೀಡೇ ||೧||


ಲಿಪ್ಯಂತರಣ (IAST):

maunavyākhyā prakaṭita parabrahmatattvaṃ yuvānaṃ

varṣiṣṭhānte vasad ṛṣigaṇaiḥ āvṛtaṃ brahmaniṣṭhaiḥ |

ācāryendraṃ karakalita cinmudram-ānandamūrtiṃ

svātmārāmaṃ muditavadanaṃ dakṣiṇāmūrtim īḍe ||


ಮೌನವ್ಯಾಖ್ಯಾನದಿಂದ ಪ್ರಕಟಗೊಂಡ ಪರಬ್ರಹ್ಮತತ್ತ್ವವನ್ನು; ತರುಣನಾದ -

ಬ್ರಹ್ಮನಿಷ್ಠರಾದ, ವಯೋವೃದ್ಧರಾದ ಋಷಿಗಳಿಂದ ಸುತ್ತುವರಿಯಲ್ಪಟ್ಟವನಾದ;

ಕರತಲದಲ್ಲಿರುವ ಚಿನ್ಮುದ್ರೆಯ ಮೂಲಕ ಜ್ಞಾನೋಪದೇಶವನ್ನು ನೀಡುವ;

ತನ್ನ ಸ್ವರೂಪದಲ್ಲಿಯೇ ಆನಂದಿಸುವವನಾದ, ಪ್ರಸನ್ನವದನನಾದ ದಕ್ಷಿಣಾಮೂರ್ತಿಗೆ ತಲೆಬಾಗುವೆ. 


ವ್ಯಾಖ್ಯಾನ:

"ಅಂದು ಆ ಆದಿಗುರು ದಕ್ಷಿಣಾಮೂರ್ತಿ ಆ ಹೊತ್ತು ಇದ್ದುದನ್ನು ಮಾತಿನಿಂದ ಹೇಳಿರಲಿಲ್ಲ." (ಏಕಾಣ್ಮ ಪಂಚಕಂ)  ಆದರೆ ಆ ಋಷಿವರ್ಯರು ಹೇಳದುದನ್ನು ಹೇಳದೆಯೇ ಗ್ರಹಿಸಬಲ್ಲವರಾಗಿದ್ದರು. ಇದು ಆದಿಗುರುವಿನ ಮೌನ ವ್ಯಾಖ್ಯಾನ. 


ಮಹಾದೇವನಾದ ಆದಿಗುರು ದಕ್ಷಿಣಾಮೂರ್ತಿ ತನ್ನ ಮಾತಿಲ್ಲದ ಮೌನವ್ಯಾಖ್ಯಾನದ ಮೂಲಕ ಪರಬ್ರಹ್ಮ ತತ್ತ್ವವನ್ನು ಬೋಧಿಸಿದನು ಮೌನದಿಂದಲೇ ವಯೋವೃದ್ಧರಾದ ಋಷಿಗಳಿಗೆ ಬೋಧಿಸಿದನು. ಮೌನವೆಂಬುದು ಇಲ್ಲಿ ನಿಷ್ಕ್ರಿಯತೆಯಲ್ಲ, ಬದಲಾಗಿ ಅದು ಜ್ಞಾನದ ಪಾರಮ್ಯ. 


ರಮಣ ಮಹರ್ಷಿಗಳು ಪರಬ್ರಹ್ಮ ತತ್ತ್ವವನ್ನು ಮಾತಿನಿಂದ ವಿವರಿಸಲು ಸಾಧ್ಯವಿಲ್ಲ ಎಂಬುದನ್ನು ಅತ್ಯಂತ ಅರ್ಥಗರ್ಭಿತವಾಗಿ ಸೂಚಿಸುತ್ತಾರೆ. ಶಬ್ದವು ದ್ವೈತದ ವಸ್ತು: ಶಬ್ದ–ಅರ್ಥ, ಗುರು–ಶಿಷ್ಯ, ಬೋಧಕ–ಬೋಧ್ಯ ಇವುಗಳೆಲ್ಲ ಭಿನ್ನತ್ವದ ಮೇಲೆ ನೆಲೆಗೊಂಡಿವೆ. ಆದರೆ ಪರಬ್ರಹ್ಮ ತತ್ತ್ವವೇ ಸಚ್ಚಿದಾನಂದ; ಅದು ಸ್ವಯಂ ಪ್ರಕಾಶಮಾನ, ನಿರ್ವಚನಾತೀತ. ಆದುದರಿಂದ ಆದಿಗುರು ದಕ್ಷಿಣಾಮೂರ್ತಿಯ ಬೋಧನೆ ಮಾತಿನಿಂದಲ್ಲ, ಸ್ವಾತ್ಮಾನುಭವದ ನಿಶ್ಶಬ್ದ ಪ್ರಕಾಶದಿಂದ ಎಂದು ತಿಳಿಯಬೇಕು. ಗುರುವಿನ ಪರಮ ಕರುಣಾಮಯವಾದ ಕಟಾಕ್ಷವೇ ಶಿಷ್ಯನ ಹೃದಯದಲ್ಲಿ ಬೋಧನೆಯಾಗಿ ನೆಲೆಗೊಳ್ಳುತ್ತದೆ.

ತಾತ್ಪರ್ಯ:

ಮೌನ ವ್ಯಾಖ್ಯಾನವು ಬೋಧನೆಯ ಉತ್ತುಂಗ ಮಾತ್ರವಲ್ಲದೆ ಅದು ಬೋಧದ ಸ್ವರೂಪವೇ ಆಗಿದೆ. ಇದು ರಹಸ್ಯ; ಇದು ಉಪನಿಷತ್ತುಗಳ ಬೋಧನೆಯ ಸಾರ.

ಕೃಷ್ಣಪ್ರಕಾಶ ಬೊಳುಂಬು


No comments:

Post a Comment

The Hidden Reality of Worship: Christianity, Islam, and the Indic Matrix

  Vigraha–Ārādhana and the Indic Civilizational Matrix Introduction Debates about “idol worship” have long been used in religious polemics i...