Wednesday, February 19, 2014
ಅನುಭವ
ದೂರ ದೂರದೊಳು ಅಲೆದಲೆಯುತಲಿದ್ದ ಜೀವಗಳೆರಡನ್ನು ಒಂದುಗೂಡಿಸಿದೆ
ಅರಿಯದ ಬಾಂಧವ್ಯಗಳನೊಟ್ಟುಗೂಡಿಸುತ್ತ ಅರಿಯದ ತಾಣದೊಳು ಎನ್ನ ತಂದು ಕೂರಿಸಿದೆ
ಜನಿಮರಣಂಗಳಲ್ಲೂ ಇಹಪರಂಗಳಲ್ಲೂ (೨)
ಬಿಡದಲೆ ಕಾಯುತ್ತ ದಾರಿಗಾಣಿಸಿದೆ
ಹೊಸತನು ಅರಿತಾಗ ಹಳತನು ತೊರೆದಾಗ
ಅಪರವೆಂಬುದು ಕಾಣೆ ನಿನ್ನ ಸೃಷ್ಟಿಯೊಳಗೆ
ನಿನ್ನನು ಅರಿತಾಗ ಮುಚ್ಚಿದ್ದು ತೆರೆದಾಗ
ನೀನೇ ನೀನಿದ್ದುದ ಕಂಡೆ ನಿನ್ನ ಸೃಷ್ಟುಯೊಳಾಗೆ
ಬರಿದೊಂದು ಸ್ಪರ್ಶದ ಮೋಹಕ ಮಾಯೆಯಲಿ
ಅರಿಯದ ತೀರದೊಳು ಎನ್ನ ತಂದು ಕೂರಿಸಿದೆ
ದೂರ ದೂರದೊಳು ಅಲೆದಲೆಯುತಲಿದ್ದ ಜೀವಗಳೆರಡನ್ನು ಒಂದುಗೂಡಿಸಿದೆ
ಅರಿಯದ ಬಾಂಧವ್ಯಗಳನೊಟ್ಟುಗೂಡಿಸುತ್ತ ಅರಿಯದ ತಾಣದೊಳು ಎನ್ನ ತಂದು ಕೂರಿಸಿದೆ
Monday, August 26, 2013
ಮಳೆ
ಎಡೆಬಿಡದೆ ಸುರಿಯುವ ಮಳೆಗೆ
ಕೊಚ್ಚಿಹೋದುವು ಹಲವೂ
ಕೊಚ್ಚೆಯೊಳು ಅರಳೀತೇ ಕೆಂಪನೆಯ ತಾವರೆ
ಕೊನೆಯಿರದ ಸುರಿತದ ನಡುವೆ
ಕೊನೆಗಂಡಿತಂದು ಮಳೆಯೂ
ಇನ್ನೊಮ್ಮೆ ಬಾರದೇ ಆಷಾಢ ಮಾಸ
ಸುಡುವ ಬೇಗೆಯ ಬಿಸಿಗೆ
ಒಣಗಿ ಮರ-ಗಂಟಿಗಳು
ಇನ್ನೊಮ್ಮೆ ಕೊನರುವುದೇ ಕನಲಿರುವ ಕೊಂಬೆ
ತನ್ನದಿರೆ ತನ್ನದೆಂದೂ
ಅನ್ಯವಿರೆ ಪರವೆಂದೂ
ಅನ್ಯವನ್ನೊ ಳಗೊಂಡೀತೇ ಮುರುಟಿರುವ ಮಾನಸ
ವ್ರಣ
ನಿನ್ನನರಿತೆನು ಎಂದು
ತಿಳಿದಿದ್ದೆ ನಾನಂದು
ನಮ್ಮ ದೇಹಗಳ ನಾವರಿತುಕೊಂಡ ಹಾಗೆ
ಒಂದು ಸ್ಪರ್ಶದಲಿ ಒಂದಂಗ ಮಿಡಿವಂತೆ
ಇನ್ನೊಂದು ಸ್ಪರ್ಶದಲಿ ನೋವನೀವಂತೆ
ಎಲ್ಲಾ ತಿಳಿದಂತೆ ಭ್ರಮೆಗೊಂಡಿದ್ದೆ ನಾನು
ಭ್ರಮೆ ಕಳಚಿತೊಂದು ದಿನ
ತಿಳಿಯಲಾರದೆ ಹೋದೆ
ನನ್ನ ದೇಹವನೇ ನಾನರಿಯಲಿಲ್ಲ
ಮೇಲುಹರಿವಿನ ಮಂಜು
ನಿಜದಲ್ಲಿ ಹಿರಿದೆಂದು
ಮಂಜುಗುಡ್ಡೆಯ ಗಾತ್ರಾ ನಾನರಿಯಲಿಲ್ಲ
ಹೊರಗೆ ಕಾಣುವ ಪೊರೆಯ
ಒಳಗನರಿಯದೆ ಹೋದೆ
ಒಳಗೆ ಬೆಳೆದಿದ್ದ ವ್ರಣಾ ನಾನರಿಯಲಿಲ್ಲ
ಮಂಜುಗುಡ್ಡೆ = iceberg
ಎಲ್ಲೆ
ನಾನರಿಯದಾದೆನೇಕೋ
ಪ್ರತಿ ಕ್ಷಣದ ಭವವೇಕೋ ಕಾಡುವಂಥ ಅಚ್ಚರಿ
ಎರಗಿದುವು ಸಿಡಿಲುಗಳು
ನಡುಗಿಸುವ ಗುಡುಗಿನ ತೆರದೆ
ಸುಟ್ಟು ಕರಟಿದ ಒಡಲ ಅರಿಯದಾದೆನು
ದಟ್ಟ ಕಾಡಿನ ನಡುವೆ
ಚಿಗಿತ ಮೊಲ್ಲೆ ಮೊಗ್ಗುಗಳ
ನಟ್ಟಿರುಳ ಕತ್ತಲಲಾ ಘ್ರಾಣಿಸದೆ ಹೋದೆನು
ಉತ್ತುಂಗದುತ್ಕಟತೆಯಲಿ
ಜಗವ ಮರೆತಿರುವಾಗ
ಕಳೆದುಹೋದುದನೇಕೋ ತಿಳಿಯದಾದೆನು
Tuesday, August 13, 2013
ತಿರುಗಿನೋಡಿದ ಮೋರೆ
ತಿರುಗೆ ತಿರುತಿರುಗಿ ನೋಡದೇಕೆ
ಕಂಡು ಕಾಣದ ಚೆಲುವು ಕೇಳಿ ಕೇಳದ ಇನಿಪು
ತನ್ನ ಮೆಯ್ಯ ಮಾಟವನ್ನು ತೋರದೇಕೆ
ಕನಲಿ ಮಸಿಯಾಗುವ ಮುನ್ನ ಬರೆದಿಟ್ಟ ಓಲೆಗಳು
ತಂತಮ್ಮ ಗಮ್ಯಗಳ ಸೇರವೇಕೆ
ಕೊನೆಯ ಕೊಳ್ಳುವನ್ನಕ ಇಡಿದಿಡಿವ ಚಾಣಗಳು
ಅರೆಯಿಂದ ರೂಪೊಂದ ಕಡೆಯವೇಕೆ
ಮತ್ತೆ ಒರೆಯುವ ಮುನ್ನ ತಡವರಿಸಿ ಮಾತುಗಳು
ಪಿಸಿಯುತ್ತ ತಾವ್ತಾವೇ ಉಲಿಯವೇಕೆ
ಮತ್ತೆ ಕರೆಯುವ ಮುನ್ನ ಕರೆದಿದ್ದ ಧ್ವನಿಗಳು
ತಂತಮ್ಮ ಜಾಡುಗಳ ತೋರವೇಕೆ
ಕನಸು
ಹೊಸೆದು ಹೊಸದೊಂದನು
ಕೋಪ-ತಾಪ
ನಿನ್ನನಿಂದು ದ್ವೇಷಿಸಲಾರೆ,
ನಿನ್ನನಿಂದು ಸೈರಿಸಲಾರೆ.
ನಿನ್ನನಿಂದು ತಾಳಲಾರೆ,
ನಿನ್ನನಿಂದು ಅಗಲಿರಲಾರೆ.
ನಿನ್ನ ಕಡೆಗಣ್ಣ ನೋಟಗಳು;
ತುಟಿಯಂಚಿನಲ್ಲಿ ಕೆಟ್ಟ ಕಡುಮುನಿಸನು ತರದೇ?
ನಾನಿಂದು ತಾಳದಾದೆ,
ಕೋಪಿಸುತ್ತ ಇದ್ದಿರದಾದೆ;
ಜೇನಿನೊಳದ್ದಿದ ಆ ಕೆಂದುಟಿ ಮತ್ತೆ ಎನ್ನ ಕೋಪವ ಕರಗಿಸದೇ?
ಶೂನ್ಯ
ನೀನಿರದ ಈ ರಾತ್ರಿ
ಮೇಲೆಲ್ಲ ಶೂನ್ಯವಾಗಿ
ಬಾನ ನಕ್ಷತ್ರಗಳೂ ಕಾಣದಿಹವು
ಕಣ್ಣ ಹನಿ
ಕಣ್ಣ ಹನಿ ಜಾರಿತು
ಹೇಳಿದರೂ ಕೇಳದೆ
ಕಣ್ಣು ಕಿವಿಗೆಷ್ಟು ದೂರ ಎಂದಿಂದು ಅರಿತೆ
ಒಂದೆಡೆಯೆ ಇದ್ದರೂ
ಎದುರು ಮುಖ ಮಾಡಿವೆ
ತಮ್ಮ ತಾವರಿಯದಂತೆ ಎಂದಿಂದು ಅರಿತೆ
ದೂರದಿಂದೊಂದು ಸದ್ದು
ಮೊದಲ ಸಲ ಕೇಳಿಬಂತು
ಕಣ್ಣ ಹಾಯಿಸುವ ಮುನ್ನ ದೂರವಾಯಿತು
ಕಾಣದಂತಹ ನೋಟ
ಮೊದಲ ಸಲ ಕಂಡುಬಂತು
ಕಿವಿಯ ಅಗಲಿಸುವ ಮುನ್ನ ಕಾಣದಾಯಿತು
ಕೇಳಲೂ ಆರೆನು
ಕೇಳದಿರಲಾರೆನು
ಎದೆಯ ತುಡಿತದ ಪರಿಯ ಬಣ್ಣಿಸಲಾರೆನು
ಕಾಣಲೂ ಆರೆನು
ಕಾಣದಿರಲಾರೆನು
ಒಳಗೆ ಹುದುಗಿದ ಅರಿಯ ಮಣಿಸಲಾರೆನು
[soundcloud url="https://api.soundcloud.com/tracks/81901997" width="100%" height="166" iframe="true" /]
ಕಾಣದ ಲೋಕ
ನಾ ಕಾಣದ ಲೋಕ;
ತೆರಕೊಂಡಿತಿಂದು ಇಲ್ಲಿ,
ಕಂಡಿರದ ಮಾಟಗಳ ಕೊಡಮಾಡಿತು.
ಎಲ್ಲೋ ಒಮ್ಮೆ ಕಂಡ ಹಾಗೆ;
ಕಂಡು ಮರೆತು ಹೋದ ಹಾಗೆ,
ಕಾಣದಾಗಲೂ ಕೂಡ ಕಾಣುತಿದ್ದ ಹಾಗೆ.
ದೂರದಿಂದ ಕಂಡೆ;
ಕಂಡು ಸೋತುಹೋದೆ,
ಮಾತುಗಳಿಲ್ಲದೆ ಮೂಕನಾಗಿಹೋದೆ.
ನೀನೇನೋ ದೋಚಿಕೊಂಡೆ;
ನಾನೇನೋ ಕಳೆದುಕೊಂಡೆ,
ಕೊಟ್ಟುಕೊಳುವ ಲೆಕ್ಕವನೂ ನಾ ಮರೆತುಹೋದೆ.
ಕೇಳರಿಯದಾ ರಾಗ;
ನಿನ್ನ ಪಿಳ್ಳಂಗೋವಿಯಲಿ,
ನನ್ನ ಸ್ಪರ್ಶದಿಂದೊಮ್ಮೆ ಮೂಡಿಬಂದ ಹಾಗೆ.
ಆಕಾಶ ಗೋಪುರದ;
ಮೇಲುಹಾಸನೂ ದಾಟಿ,
ಇಂಪಾದ ರಾಗವನ್ನು ಊದುತಿರುವ ಹಾಗೆ.
[soundcloud url="https://api.soundcloud.com/tracks/126563779" params="color=ff6600&auto_play=false&show_artwork=true" width="100%" height="166" iframe="true" /]
ನಿನ್ನದೊಂದೇ ಗುಂಗು
ನಿನ್ನದೊಂದೇ ಗುಂಗು
ಎತ್ತ ಹೋದರೂ ಇಂದು
ನಿನ್ನ ಯೋಚನೆಯಲ್ಲಿ ಕಳೆದುಹೋದೆನು
ನಿನ್ನ ಗುಂಗಿನೊಳಿದ್ದು
ಮರಳ ಪ್ರತಿಮೆಯ ಕೊರೆದು
ಕಡಲ ತೀರದೆ ನಿಂತು ಕಳೆದುಹೋದೆನು
ಅಲೆಯ ಸದ್ದಿನ ಜೊತೆಗೆ
ಸಿಡಿದು ಸಿಡಿಯುವ ಗುಡುಗು
ದಿಣ್ಣೆ ಹಳ್ಳದ ನಡುವೆ ಕಳೆದುಹೋದೆನು
ಕಡಲ ಮೊರೆತದ ನಾದ
ಕಿವಿಗೆ ಇಂಪಾಗಿರಲು
ದಿಣ್ಣೆ ಹಳ್ಳದ ನಡುವೆ ಕಳೆದುಹೋದೆನು
ದಿನವು ಕೊನೆಗೊಳ್ಳುವ ಹೊತ್ತು
ದಿಕ್ಕು ಕೊನೆಗೊಳ್ಳುವ ಕಡೆಗೆ
ದಿಟ್ಟಿಯಿಡುತಲೇ ಇಂದು ಕಳೆದುಹೋದೆನು
ಎಂದು ಸೇರುವುದೆಂದು
ಆ ಎರಡು ರೇಖೆಗಳು
ಬೆರಗುಗೊಳುತಲೇ ನಿಂತು ಕಳೆದುಹೋದೆನು
[soundcloud url="https://api.soundcloud.com/tracks/86309502" width="100%" height="166" iframe="true" /]
ಬಿಟ್ಟುಬಿಡು
ಮಂದ್ರ ಸ್ಥಾಯಿಯಲೀಗ ಹಾಡಿಕೊಳಲೇ?
ಆರ ಭಜಿಸಲಿ ಈ ಗಾಢ ತಿಮಿರದೊಳು
ಮನದ ಕದವನು ಈಗ ಮುಚ್ಚಿಕೊಳಲೇ?
ಬಿಟ್ಟುಬಿಡು ಈಗೆನ್ನ ದೈತ್ಯ ತೆರೆಗಳ ನಡುವೆ
ರೇತ ಸಮುದ್ರದಲೀಗ ತೇಲಿಕೊಳಲೇ?
ಅತ್ತು ಬಳಲಿದ ಕಣ್ಣ ಹನಿ ಬತ್ತಿಹೋಗಿರಲು
ಕ್ಷುದ್ರ ರೆಪ್ಪೆಯನೊಮ್ಮೆ ಮುಚ್ಚಿಕೊಳಲೇ?
ಕಂಡ ಕನಸುಗಳೆಲ್ಲ ವಿಚ್ಛಿದ್ರವಾಗಿರಲು
ಎದೆಯ ಬಯಕೆಯನೀಗ ಬಿಚ್ಚಿಕೊಳಲೇ?
ಎಲ್ಲ ಕೊನೆಗೊಳುವ ಮುನ್ನ ಮನವೀಗ ಬೇಡುತಿದೆ
ಎನ್ನ ಕರ್ಕಶ ಸ್ವರದಿಂದೊಮ್ಮೆ ಹಾಡಿಕೊಳಲೇ?
[soundcloud url="https://api.soundcloud.com/tracks/86459760" width="100%" height="166" iframe="true" /]
ಮಳೆ
ಕಾಮನಬಿಲ್ಲು
ನಾನೊಂದು ಕಾಮನಬಿಲ್ಲ
ಹಿಡಿದು ತರುವಂತಿದ್ದರೆ
ತಂದೇ ತರುವೆ ನಿನ್ನೊಡನೆ ಹಂಚಿಕೊಳ್ಳುವೆ
ನಿನಗಾಗಿ ಗಿರಿಮಾಲೆಗಳ
ಕಟ್ಟಿ ಕೊಡುವಂತಿದ್ದರೆ
ಕಟ್ಟಿ ಕೊಡುವೆ ನಿನ್ನನ್ನೂ ತುತ್ತ ತುದಿಗೇರಿಸಿ
ನಿನ್ನೆಲ್ಲಾ ನೋವುಗಳನ್ನೂ
ಅನುಭವಿಸುವಂತಿದ್ದರೆ
ಸ್ವೀಕರಿಸಿ ಎಲ್ಲವನ್ನೂ ನಾ ಹಂಚಿಕೊಳ್ಳುವೆ
ನಡೆಯವೀ ಮಾತುಗಳೆಂದೂ
ಬರಿಯ ಕನಸಿನವೀ ಮಾತುಗಳೆಂದೂ
ನೀರ ಮೇಲೆ ದೋಣಿಗಳ ತೇಲಿಬಿಡುವೆ
ಕಾಗದದ ಮೇಲೆ ಬರೆದ
ಬರಿಯ ಕವಿತೆ ಸಾಲುಗಳೆಂದೂ
ಕಾಗದದ ದೋಣಿಯಂತೆ ಸುಳ್ಳು-ಪೊಳ್ಳು-ಟೊಳ್ಳು
ಹಾಡಲಾಗದುದು
ಬರವು ಇನ್ನೂ ನಾದ ಹಲವು
ಹಾಡಬಯಸಿದುದನ್ನೂ ಹಾಡದಾದೆನು
ಎದೆಯ ಮಾತ ಹೇಳಲೇಕೋ
ಕೂಡಿ ಬರದು ಕಾಲವೇಕೋ
ಹೇಳಬಯಸಿದುದೆಲ್ಲಾ ಉಳಿದುಹೋಯಿತು
ಮೊಗ್ಗು ಏಕೆ ಅರಳದೀಗ
ಗಾಳಿಯೇಕೆ ಆಡದೀಗ
ಕಾಣುತಿದ್ದ ಮುಖವೂ ಕಾಣದಾಯಿತು
ನನ್ನ ಮನೆಯ ಬೀದಿಯ ಮುಂದೆ
ಕಿಟಕಿಯಲ್ಲಿ ಕಂಡ ಮುಖವ
ಒಮ್ಮೆ ಕರೆಯುವ ಮೊದಲೇ ಬೆಳಕು ಆರಿತು
ಮತ್ತೆ ಎದುರುಗೊಳ್ಳುವ ತನಕ
ಮತ್ತೊಮ್ಮೆ ಅವಳ ಕಾಣುವ ತವಕ
ಎದೆಯ ಗೂಡಿನಲೆಲ್ಲೋ ಉಳಿದುಹೋಯಿತು
ಸ್ಫೂರ್ತಿ
ಕೇಳಲು ಇಂಪಾದ ನಾದವಾಗಿಸು
ಇರದಿದ್ದ ಕನಸುಗಳ ತೋರಿ ತೋರುತ ಮತ್ತೆ
ಇರುಳಿನ ನಶೆಯೊಳಗೆ ತೇಲಿತೇಲಿಸು
ಅವಿತಿಟ್ಟ ಭಾವಗಳ ಹೇಳಿರದ ಗುಟ್ಟುಗಳ
ಒಮ್ಮೆ ತೆರೆದು ತೋರಿಸುತ್ತ ನಿರಾಳವಾಗಿಸು
ಬಂಧದೊಳು ಸಿಲುಕಿದ ಶೂನ್ಯವಾದ ಮನಸ್ಸಿಗೆ
ದಿಕ್ಕುಗಳ ತೋರಿಸುತ್ತ ವಿಷಾದವ ನೀಗಿಸು || ೧||
ಕವಿದಿರುಳಲಿ ತುಂಬು ಬೆಳದಿಂಗಳ
ಮೊಗೆ ಮೊಗೆದೀಯುತ ಬೊಗಸೆಯಲಿ
ಇರದೊಂದು ಕನಸನ್ನು ಇರಗೊಡುತಲಿ ಮತ್ತೆ
ರಾಗಗಳಲೆಯೊಳು ತೇಲಿತೇಲಿಸು || ೨ ||
[soundcloud url="https://api.soundcloud.com/tracks/69280433" width="100%" height="166" iframe="true" /]
ಸನಿಹ
ಮನಸ್ಸಿನ ಭ್ರಾಮಕ ಪಟಲದೊಳು
ಈ ಕ್ಷಣ ನೀನೆಲ್ಲಿಲ್ಲಿಹೆಯೋ
ಪ್ರತಿ ಕ್ಷಣದೊಳೂ ನಿನ್ನ ಧ್ಯಾನಿಸುವೆ
ಪ್ರತಿ ಜೀವದಲೂ ನಿನ್ನನೇ ಕಾಣುವೆ
ಹಿಂಬಾಲಿಸುವೆ ನಿನ್ನ ನೆರಳಾಗಿ
ನೀನಲ್ಲದೆ ಬೇರೆ ಲೋಕವ ಕಾಣೆನು
ಎಲ್ಲಿದ್ದರೂ ಕಾಣುವೆ ನಿನ್ನಿರವ
ಮರಕೆಯ ಕಾಣೆನು ಇರುಳುಗಳಲ್ಲಿ
ಬಂಧಿಯೇ ಆದೆನು ಮಾಯೆಯೊಳು
ದೂರದೊಳಿದ್ದೂ ಸನಿಹದೊಳಿರುವೆ
ಮನಸ್ಸಿನ ಭ್ರಾಮಕ ಪಟಲದೊಳು
ಪ್ರೇಮ ನಿವೇದನೆ
ಪ್ರಣಯ
ಪೌರ್ಣಮಿ
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ
ಕಗ್ಗಮಾಲಿಕೆ – ೫ ಸಂಕ್ರಮಣದ ಪ್ರೇತಾವಸ್ಥೆ ಪೀಠಿಕೆ: ಜಗತ್ತು ಸ್ಥಿರವಾದುದಲ್ಲ, ಅದು ನಿರಂತರ ಬದಲಾವಣೆಗೆ ಒಳಪಟ್ಟಿದೆ. ಆದರೆ ಈ ಬದಲಾವಣೆಯ ಹಂತದಲ್ಲಿ ಹಳೆಯ ಮೌಲ್ಯಗಳ...
-
ಕಾಸರಗೋಡು ತುಳುನಾಡಿನ ಭಾಗ - ಪಾದೂರು ಗುರುರಾಜ ಭಟ್ಟರು ತುಳುನಾಡಿನ ಬಗೆಗಿನ "ತುಳುನಾಡು" ಅಧ್ಯಯನ ಗ್ರಂಥದಲ್ಲಿ ಪಾದೂರು ಗುರುರಾಜ ಭಟ್ಟರು ಹೀಗೆ ಹೇಳುತ್ತಾ...
-
ಅನ್ಯದೇವತಾರಾಧನೆಗಳನ್ನು ಒಳಗೊಂಡ ಸಾರ್ವಜನಿಕ ಆಚರಣೆಗಳನ್ನು ಬಹುತೇಕ ಮುಸಲ್ಮಾನರು ಸಾರಾಸಗಟಾಗಿ ನಿರಾಕರಿಸುತ್ತಾರೆ ಎನ್ನುವುದು ತಪ್ಪು. ಇದು ವಾಸ್ತವಕ್ಕೆ ದೂರವಾದ ಅಂಶ. ಮ...
-
ಯು.ಆರ್. ಅನಂತಮೂರ್ತಿ ಅಜಕ್ಕಳ ಗಿರೀಶ ಭಟ್ ಅವರ ಲೇಖನ ಯು.ಆರ್. ಅನಂತಮೂರ್ತಿಯವರ ಆತ್ಮಕಥೆ 'ಸುರಗಿ'ಯಲ್ಲಿ ದಾಖಲಾಗಿರುವ ೨೫ ಆಗಸ್ಟ್ ೨೦೦೮ರ ದಿ...