Saturday, November 8, 2025

ರಮಣ ಮಹರ್ಷಿಗಳ “ನಾನು–ಯಾರು” ಚಿಂತನೆಯ ಮುಂದುವರಿಕೆ

 

 ಏಕಾಣ್ಮ ಪಂಚಕಂ - 4


ರಮಣ ಮಹರ್ಷಿಗಳ “ನಾನು–ಯಾರು” ಚಿಂತನೆಯ ಮುಂದುವರಿಕೆ



ಪೊನ್ನುಕ್ಕು ವೇರಾಗ ಭೂಷಣಂ ಉಳ್ಳದೋ

ತನ್ನೈ ವಿಡು ತನುವೇದು - ತನ್ನೈ

ತನುವೆಂಬಾನ್ ಅಜ್ಞಾನಿ ತಾನಾಗ ಕೊಳ್ವಾನ್

ತನ್ನೈಯರಿಂದ ಜ್ಞಾನಿ ದರಿಪ್ಪೈ - ತಾನಾ ದೊಲಿಯಾಲ್


ಹೊನ್ನ ಹೊರತಾದ ಹಲ ಭೂಷಣಗಳಿರವು 

ತನ್ನನೇ ಬಿಟ್ಟು ತನುವೆತ್ತ - ತನ್ನನೇ 

ತನುವೆಂಬನಜ್ಞಾನಿ ತಾನಾಗಿದ್ದುಕೊಂಬನು 

ತನ್ನನರಿತನು ಜ್ಞಾನಿ ಚಿಂತಿಪನು ತನ್ನಲ್ಲಿ ತಾನೆನುತ.


ಪದವಿಂಗಡಣೆ:

[ಭೂಷಣಗಳು+ಇರವು] [ತನು+ಎತ್ತ] [ತನು+ಎಂಬಂ+ಅಜ್ಞಾನಿ] [ತಾನ್+ಆಗಿ+ಇದ್ದುಕೊಂಬನು][ತನ್ನಂ+ಅರಿತನು]


ಅರ್ಥಗಳು:

ಹೊನ್ನು = ಚಿನ್ನ, ಭೂಷಣ = ಅಲಂಕಾರ, ತನು = ಶರೀರ, ಅಜ್ಞಾನಿ = ಆತ್ಮಸ್ವರೂಪವನ್ನು ಅರಿಯದವನು, ಜ್ಞಾನಿ = ಆತ್ಮಸ್ವರೂಪವನ್ನು ಅರಿತವನು, ಚಿಂತಿಪನು = ಧ್ಯಾನಿಸುತ್ತಾನೆ


ವ್ಯಾಖ್ಯಾನ:

ಚಿನ್ನದಿಂದ ಆಭರಣವನ್ನು ಮಾಡಲಾಗುತ್ತದೆಯಾದರೂ ಆಭರಣಕ್ಕೆ ಚಿನ್ನದಿಂದ ಹೊರತಾದ ಸ್ವತಂತ್ರ ಅಸ್ತಿತ್ವವಿಲ್ಲ ಮತ್ತು ತಾನೆಂಬ ಅವಬೋಧದಿಂದ ಹೊರತಾದ ಶರೀರಕ್ಕೂ ಅಸ್ತಿತ್ವವಿಲ್ಲ. ಆ ಅವಬೋಧವನ್ನು ಲೆಕ್ಕಿಸದೆ ಶರೀರವನ್ನೇ “ನಾನು” ಎಂದು ಬಗೆಯುವವನು ತಾನು ಅಜ್ಞಾನಿಯಾಗಿ ಇದ್ದುಕೊಳ್ಳುತ್ತಾನೆ. ಆದರೆ ತನ್ನ ಸ್ವರೂಪವನ್ನರಿತವನಾದ ಜ್ಞಾನಿ ತಾನೆಂಬ ಅವಬೋಧದಲ್ಲಿ ತಾನೆಂದು ಧ್ಯಾನಿಸಬಲ್ಲನು.


ತಾತ್ಪರ್ಯ:

ರಮಣ ಮಹರ್ಷಿಗಳ ತತ್ತ್ವಬೋಧೆಯಲ್ಲಿ ಪರಮವಸ್ತುವಿನೆಡೆಗಿನ ಚಿಂತನೆ ಅತಿ ಸರಳವೆನಿಸಿಕೊಂಡಿದ್ದರೂ ಅದು ಅತ್ಯಂತ ಸೂಕ್ಷ್ಮವಾದುದೆಂದು ತಿಳಿಯಬೇಕು. ಆಭರಣಕ್ಕೆ ಚಿನ್ನದಿಂದ ಹೊರತಾದ ಸ್ವತಂತ್ರ ಅಸ್ತಿತ್ವವಿಲ್ಲದಂತೆ, ಶರೀರವೆಂಬ ರೂಪಕ್ಕೂ ಆತ್ಮಸ್ವರೂಪದಿಂದ ಹೊರತಾದ ಸ್ವತಂತ್ರ ಅಸ್ತಿತ್ವವಿಲ್ಲ. ಅಜ್ಞಾನಿಯಾದವನು ಶರೀರವನ್ನು “ನಾನು” ಎಂದು ತಪ್ಪಾಗಿ ಬಗೆದುಕೊಳ್ಳುತ್ತಾನೆ; ಜ್ಞಾನಿಯಾದವನು “ನಾನು” ಎಂಬ ಅವಬೋಧದಲ್ಲಿದ್ದುಕೊಂಡು “ನಾನು ಯಾರು?” ಎಂದು ಧ್ಯಾನಿಸಿದಾಗ “ತನ್ನಲ್ಲಿ ತಾನು” ಅಥವಾ ಆತ್ಮ ಸಾಕ್ಷಾತ್ಕಾರದ ಮೂಲಕ ನಿತ್ಯ ಚೈತನ್ಯಸ್ವರೂಪ ಸಚ್ಚಿದಾನಂದವಾಗಿ ವಿಶ್ರಾಂತಿ ಪಡೆಯುತ್ತಾನೆ. “ನಾನು” ಎನ್ನುವ ಬೌದ್ಧಿಕ ಮಟ್ಟದ ಭಾವನೆಯನ್ನು ತೊರೆದು ಅದರ ಮೂಲಕ್ಕೆ ಸಾಗಿ ಆತ್ಮಸ್ವರೂಪದಲ್ಲಿ ನೆಲೆಗೊಳ್ಳುವುದು ರಮಣ ಮಹರ್ಷಿಗಳು ಬೋಧಿಸಿದ ಸ್ವರೂಪಧ್ಯಾನದ ಸಾರ.


ಕೃಷ್ಣಪ್ರಕಾಶ ಬೊಳುಂಬು


No comments:

Post a Comment

ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ

ಜಮೀನ್ದಾರಿ ಪದ್ಧತಿ ಮತ್ತು ಶೋಷಣೆ ಬ್ರಿಟಿಷರಿಂದ ಆರಂಭಗೊಂಡಿತೇ ಹೊರತು ಕೇವಲ ಜಾತಿ ವ್ಯವಸ್ಥೆಯಿಂದ ಸೃಷ್ಟಿಯಾಯಿತೆನ್ನುವುದು ಪೆರಮೆ. ದಮನಕಾರಿ ಬ್ರಿಟಿಷ್ ಆಡಳಿತ ನೀತಿಗಳು...