Tuesday, August 13, 2013

ಅಂತರಾತ್ಮ

ನೀನಲ್ಲವೇ ಎನಗೆ ಸ್ಫೂರ್ತಿಗಳನಿತ್ತವನು
ನೀನಿರುವೀ ಲೋಕಕ್ಕೆ ಋಣಿಯಾದೆನೈ
ನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವು
ನಿನ್ನ ದಯೆಯಿಂದಲಿ ಸುಖಿಯಾದೆನೈ

ಕವಿದಿರುವ ಗಾಢತೆಯ
ಅಲ್ಲಿರುವ ಗೂಢತೆಯ
ನೀಗಿಸುವ ಬೆಳಕನ್ನು ನೀನಿತ್ತೆಯೈ

ಒಂದರೊಳಗೆರಡನ್ನು
ಎರಡರೊಳಗೊಂದನ್ನು
ಸೇರಿಸುತ ಸೃಷ್ಟಿಯನು ನೀ ಗೆಯ್ದೆಯೈ

ನೀನಲ್ಲವೇ ಎನ್ನ ನಲವು ನಲಿವಿನ ಚಿಲುಮೆ
ಎನ್ನ ಬಾಳ್ವೆಯನಿಂದು ಸೊಗಯಿಸಿದೆಯೈ
ನಿನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ಕೈ ಹಿಡಿದು ನಡೆಯಿಸಿದೆಯೈ

ಅನಿತರೊಳಗೊಂದನ್ನು
ಅನಿಬರೊಳಗೋರ್ವನನು
ತೋರಿಸುತ್ತ ಮಾಯೆಯನು ನೀ ತೊಡೆದೆಯೈ

ದೂರವಾಗಿದ್ದುದರ ಇರವನ್ನು ತಿಳಿಯಿಸುತ್ತ
ಮಾಯೆಯನು ನೀಗಿಸುತ್ತ ನೀ ಪೊರೆದೆಯೈ

ನೀನಲ್ಲವೇ ಎನಗೆ ಸ್ಫೂರ್ತಿಗಳನಿತ್ತವನು
ನೀನಿರುವೀ ಲೋಕಕ್ಕೆ ಋಣಿಯಾದೆನೈ
ನೀನಲ್ಲವೇ ಎನ್ನ ಬಾಳ್ವೆ ಬೆಳಗಿದ ಗುರುವು
ನಿನ್ನ ದಯೆಯಿಂದಲಿ ಸುಖಿಯಾದೆನೈ

ನೀನಲ್ಲವೇ ಎನ್ನ ನಲವು ನಲಿವಿನ ಚಿಲುಮೆ
ಎನ್ನ ಬಾಳ್ವೆಯನಿಂದು ಸೊಗಯಿಸಿದೆಯೈ
ನಿನದೊಂದು ಒಲುಮೆಯಲಿ ಎಲ್ಲವ ಗೆಲ್ಲುವ ಛಲವ
ಎನಗಿತ್ತು ಕೈ ಹಿಡಿದು ನಡೆಯಿಸಿದೆಯೈ

No comments:

Post a Comment

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ

ಸಂಸ್ಕೃತ ಕೃತಕ ಭಾಷೆ ಎನ್ನುವವರ ಗಮನಕ್ಕೆ "ವ್ಯಾಕರಣ ಬದ್ಧವಾಗಿ ರಚನೆ ಮಾಡಿರುವುದೇ ಸಂಸ್ಕೃತ ಕೃತಕ ಭಾಷೆ ಎನ್ನುವುದಕ್ಕೆ ಸಾಕ್ಷಿ. ಕನ್ನಡ ಸಾಹಿತ್ಯಿಕ ಭಾಷೆಯೂ ಕೃತಕ...