ಎಸ್. ಎಲ್. ಭೈರಪ್ಪ: ಸತ್ಯಾನ್ವೇಷಣೆಯ ಹಾದಿಯಲ್ಲಿ ಎದುರಾದ ವಿವಾದಗಳು
ಅತ್ತ ಬಲಕ್ಕೂ ವಾಲದೆ ಇತ್ತ ಎಡಕ್ಕೂ ವಾಲದಿದ್ದ ಭೈರಪ್ಪನವರು ಎಡಪಂಥೀಯರಿಗೆ ಅಪಥ್ಯರಾಗಿಯೇ ಉಳಿದರು. ಕಾಲದಲ್ಲಿ ಸರಿದುಹೋದ ಘಟನೆಗಳ ವಾಸ್ತವಿಕ ಚಿತ್ರಣ ಆವರಣದೊಳಗೆ ಬಂದಿಯಾದ ಸತ್ಯಗಳ ಅನಾವರಣವೂ ಆದಾಗ ಹಿಂದು ಮೂಲಭೂತವಾದಿಯಂತೆ ಕಂಡವರು; ಸಾಂಪ್ರದಾಯಿಕ ಸಮಾಜದ ಅಹಿತ ಸತ್ಯಗಳ ಚಿತ್ರಣದ ಮೂಲಕ ಸಾಂಪ್ರದಾಯಿಕರಿಂದಲೂ ದೂರ ಉಳಿದರು. ಅದ್ಭುತ ಬರೆಹಗಾರರೆಂದು ತಮ್ಮನ್ನು ತಾವು ಕರೆದುಕೊಳ್ಳುತ್ತಲಿದ್ದವರೊಬ್ಬರು ಭೈರಪ್ಪನವರಿಗೆ ಕಾದಂಬರಿ ಬರೆಯಲು ಗೊತ್ತಿಲ್ಲ ಎಂದು ಜರೆದಿದ್ದೂ ಉಂಟು. ಆದರೆ ತಮ್ಮ ಸತ್ಯಾನ್ವೇಷಣೆಯಲ್ಲಿ ತಾವು ಕಂಡುಕೊಂಡ ವಿಚಾರಗಳನ್ನು ವಿಶದಪಡಿಸಿದಾಗ ಆ ಅದ್ಭುತ ಬರೆಹಗಾರರಿಂದ ತಾರ್ಕಿಕ ಪ್ರತ್ಯುತ್ತರಗಳು ಬಂದ ಮಾಹಿತಿ ಇಂದಿನವರೆಗೆ ದೊರಕಲಿಲ್ಲ.
ಹೌದು—ಭೈರಪ್ಪ ಎಲ್ಲರೂ ಇಷ್ಟಪಡುವ ವ್ಯಕ್ತಿಯೇನೂ ಆಗಿರಲಿಲ್ಲ. ಆದರೆ ಅವರು ಎಲ್ಲರಿಗೂ ಇಷ್ಟವಾಗಬೇಕೆಂದು ಬದುಕಿದ ವ್ಯಕ್ತಿಯೂ ಆಗಿರಲಿಲ್ಲ. ಸಾಹಿತ್ಯದ ಉದ್ದೇಶ ಸಾಂತ್ವನ ನೀಡುವುದು ಮಾತ್ರವಲ್ಲ, ಸತ್ಯವನ್ನು ಬಹಿರಂಗಪಡಿಸುವುದು ಕೂಡ ಆಗಿರುತ್ತದೆ ಎಂಬುದನ್ನು ತಮ್ಮ ಜೀವನದುದ್ದಕ್ಕೂ ಸಾಬೀತುಪಡಿಸುತ್ತ ಬದುಕಿದವರು ಅವರು . ಇದೇ ಕಾರಣದಿಂದ ಭೈರಪ್ಪ ಎಂದಿಗೂ ಪ್ರಸಕ್ತರು.
No comments:
Post a Comment